ಬೀದರ್ (ಏ.16): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಏ.16)ರಂದು ಬುಧವಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು ಸುಮಾರು 2025ಕೋಟಿ ರು.ಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಹಿನ್ನಲೆ ಸಿಎಂ ಸಿದ್ದರಾಮಯ್ಯರನ್ನ ಮೆಚ್ಚಿಸಲು ಸಚಿವ ಈಶ್ವರ ಖಂಡ್ರೆ ನೇತೃತ್ವದ ಅರಣ್ಯ ಇಲಾಖೆ ರಾತ್ರೋರಾತ್ರಿ ಚಿದ್ರಿ ರಸ್ತೆಯಲ್ಲಿ ಮರಗಳನ್ನು ನೆಡಲು ಕಸರತ್ತು ನಡೆಸಿದೆ. ಆದರೆ, ಈ ಕಾರ್ಯವನ್ನು ವಿಡಿಯೋ ಚಿತ್ರೀಕರಿಸಿದ ಸ್ಥಳೀಯ ಪತ್ರಿಕೆ ವರದಿಗಾರ ರವಿ ಅವರ ಮೇಲೆ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಪತ್ರಕರ್ತನ ಕಾಲರ್ ಹಿಡಿದು ಗೂಂಡಾ ರೀತಿ ವರ್ತಿಸಿರುವ ಅರಣ್ಯ ಇಲಾಖೆ ಅಧಿಕಾರಿ, ಪತ್ರಕರ್ತನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದುವರೆಗೆ ಸಸಿ ನೆಡುವ ಬಗ್ಗೆ ಯೋಚಿಸದೆ ಅರಣ್ಯ ಇಲಾಖೆ ಇದೀಗ ಸಿಎಂ ಸಿದ್ದರಾಮಯ್ಯ ಜಿಲ್ಲೆಗೆ ಆಗಮನಿಸಲಿರುವ ಹಿನ್ನೆಲೆ ಮುಖ್ಯಮಂತ್ರಿಗಳನ್ನು ಮೆಚ್ಚಿಸಲು ಏರ್ಪೋರ್ಟ್ ರಸ್ತೆಯಲ್ಲಿ ಸಸಿ ನೆಡುವ ಕಾರ್ಯ ಚುರುಕುಗೊಳಿಸಿದ್ದಾರೆ, ಜಿಲ್ಲಾಡಳಿತ ರಸ್ತೆಗಳನ್ನು ಸ್ವಚ್ಛಗೊಳಿಸಿ, ಗುಂಡಿಮಯ ರಸ್ತೆಗಳಿಗೆ ತೆಪ್ಪ ಹಚ್ಚುವ ಕೆಲಸ ಮಾಡಿದೆ. ಆದರೆ, ರಾತ್ರಿ ವೇಳೆ ಸಸಿ ನೆಡುವ ಚಟುವಟಿಕೆಯನ್ನು ದಾಖಲಿಸಿದ್ದಕ್ಕೆ ಪತ್ರಕರ್ತನ ಮೇಲೆ ನಡೆದ ಹಲ್ಲೆ ನಡೆಸಿರುವುದು ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ.
ಇದನ್ನೂ ಓದಿ: ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಹೆಸರಿದೆ
ಸಿಎಂ ಆಗಮನ ಯಾವಾಗ?
ಮುಖ್ಯಮಂತ್ರಿಗಳು ಅಂದು ಮಧ್ಯಾಹ್ನ 3.45ಕ್ಕೆ ಕಲಬುರಗಿ ವಿಶೇಷ ವಿಮಾನದ ಮೂಲಕ ಹೊರಟು ಸಂಜೆ 4ಕ್ಕೆ ಬೀದರ್ ಏರ್ಬೇಸ್ಗೆ ಆಗಮಿಸುವರು. ಬೀದರ್ನಿಂದ ಬೆಂಗಳೂರಿಗೆ ಪುನಾರಂಭ ಕಂಡಿರುವ ನಾಗರಿಕ ವಿಮಾನಯಾನಕ್ಕೆ ಚಾಲನೆ ನೀಡುವ ಹಿನ್ನೆಲೆಯಲ್ಲಿ ಬೀದರ್ ವಿಮಾನ ನಿಲ್ದಾಣದ ಹೊರಗೆ ಏ. 17ರಂದು ಬೆಳಿಗ್ಗೆ ಬೆಂಗಳೂರಿಗೆ ಪ್ರಯಾಣಿಸುವ 5 ಆಯ್ದ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ನೀಡಲಿದ್ದಾರೆ.ನಂತರ 4.10ಕ್ಕೆ ಬೀದರ್ ವಿಮಾನ ನಿಲ್ದಾಣ ಹೊರಗೆ (ವೇದಿಕೆಯ ಬಳಿ) ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.
ಸಂಜೆ 4.45ಕ್ಕೆ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಬೀದರ್ ವತಿಯಿಂದ ಆಯೋಜಿಸಿರುವ 2025 ಕೋಟಿ ರು. ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಜೆ 7.30ಕ್ಕೆ ಜಿಲ್ಲಾ ನೆಹರು ಕ್ರೀಡಾಂಗಣದಿಂದ ಹೊರಟು 7.40ಕ್ಕೆ ಬೀದರ್ ವಿಮಾನ ನಿಲ್ದಾಣಕ್ಕೆ ತೆರಳಿ ಬಸವಕಲ್ಯಾಣ ಅಭಿವರದ್ಧಿ ನಿಗಮದ ಸಭೆ ನಡೆಸಲಿದ್ದಾರೆ. ನಂತರ ಸಂಜೆ 8.30ಕ್ಕೆ ಬೀದರ್ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.
ಭೂರಿ ಭೋಜನ ತಯಾರಿ :
ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ನೆಹರು ಕ್ರೀಡಾಂಗಣ, ಬೀದರ್ ವಿಮಾನ ನಿಲ್ದಾಣಗಳ ಸ್ಥಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಹಿರಿಯ ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಿದರು. ಸಮಾರಂಭಕ್ಕೆ ಆಗಮಿಸುವ ಸಾರ್ವಜನಿಕರಿಗಾಗಿ ತಯಾರಿಸಲಾಗುತ್ತಿರುವ ಭೋರಿ ಭೋಜನದೊ ಜೊತೆಗೆ ಸಿಹಿ ಸವಿಯಲು ಲಾಡು ತಯಾರಿಸಲಾಗುತ್ತಿದೆ.
ಇದನ್ನೂ ಓದಿ: Breaking: ಮುಡಾ ಕೇಸ್ನಲ್ಲಿ ಸಿಎಂ ಸಿದ್ಧರಾಮಯ್ಯಗೆ ಬಿಗ್ ಶಾಕ್!
ಬಂದೋಬಸ್ತ್ಗೆ 2ಸಾವಿರ ಪೊಲೀಸ್ :
ಸಿಎಂ ಅವರ ಕಾರ್ಯಕ್ರಮದ ಬಂದೋಬಸ್ತ್ಗಾಗಿ ಸುಮಾರು 2ಸಾವಿರ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ತಿಳಿಸಿದ್ದಾರೆ.ಮಂಗಳವಾರ ಎಸ್ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತಂತೆ ಪ್ರತಿಕ್ರಿಯಿಸಿ, 1300 ಪೊಲೀಸ್ ಕಾನ್ಸ್ಟೇಬಲ್, 400 ಹೋಂ ಗಾರ್ಡ್, 150 ಜನ ಪೊಲೀಸ್ ಅಧಿಕಾರಿಗಳು, 4ಕೆಎಸ್ಆರ್ಪಿ ತುಕಡಿಗಳು ಸೇರಿದಂತೆ ಸುಮಾರು 2ಸಾವಿರ ಪೊಲೀಸರು ಸಿಎಂ ಕಾರ್ಯಕ್ರಮದ ಬಂದೋಬಸ್ತ್ಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.