ಆರತಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಸುಚಿತ್ರಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆರ್ತಿ ಅವರ ತಂದೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ನಟ ರವಿ ಮೋಹನ್ ಕೆಲವು ದಿನಗಳ ಮೊದಲು ಒಂದು ಕಾರ್ಯಕ್ರಮದಲ್ಲಿ ಗಾಯಕಿ ಕೆನಿಷಾ ಜೊತೆ ಭಾಗವಹಿಸಿದ್ದರು. ಇವರಿಬ್ಬರು ಕೈ ಕೈ ಹಿಡಿದುಕೊಂಡು ಓಡಾಡಿದ್ದರು. ಇದರ ನಂತರ ಸಮಸ್ಯೆ ಬೃಹದಾಕಾರವಾಗಿ ಬೆಳೆಯಿತು. ಗಾಯಕಿ ಕೆನಿಷಾ ಮತ್ತು ನಟ ರವಿ ಮೋಹನ್ ನಡುವೆ ಸಂಬಂಧವಿದೆ ಎಂದೂ, ಇದರಿಂದಾಗಿ ರವಿ ಮೋಹನ್ ಮತ್ತು ಆರತಿ ಅವರ ದಾಂಪತ್ಯದಲ್ಲಿ ಸಮಸ್ಯೆ ಇದೆ ಎಂದೂ ಕೆಲವು ಕಾಲದಿಂದಲೂ ವದಂತಿ ಹಬ್ಬಿತ್ತು. ಆರತಿ ಕೂಡ ಈ ಬಗ್ಗೆ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. 

ಆರತಿ ಬಗ್ಗೆ ಗಾಯಕಿ ಸುಚಿತ್ರಾ ಟೀಕೆ

ನಟ ರವಿ ಮೋಹನ್ ಮತ್ತು ಆರತಿ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಾಗ್ದಾಳಿ ನಡೆಸಿದರು. ಒಂದು ಹಂತದಲ್ಲಿ ರವಿ ಮತ್ತು ಆರತಿ ಬೇರ್ಪಟ್ಟಿದ್ದಾರೆ ಎಂದು ಘೋಷಿಸಿದರು. ನಟ ರವಿ ಮೋಹನ್ ಆರತಿಯಿಂದ ವಿಚ್ಛೇದನ ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ವಿಚಾರಣೆ ನ್ಯಾಯಾಲಯದಲ್ಲಿದೆ. ಈ ನಡುವೆ, ಗಾಯಕಿ ಸುಚಿತ್ರಾ, ಆರತಿಗೆ ಒಬ್ಬ ಪ್ರಸಿದ್ಧ ನಟನ ಜೊತೆ ಸಂಬಂಧ ಇದೆ ಎಂದು ಹೇಳಿದ್ದರು. ಸುಚಿತ್ರಾ ಅವರ ಈ ಮಾತು ಮತ್ತೆ ವಿವಾದಕ್ಕೆ ಕಾರಣವಾಯಿತು.

ಸುಚಿತ್ರಾ ವಿರುದ್ಧ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು

ಈ ಹಿನ್ನೆಲೆಯಲ್ಲಿ ಸುಚಿತ್ರಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆರತಿ ಅವರ ತಂದೆ ಕೃಷ್ಣಮೂರ್ತಿ ವಿಜಯಕುಮಾರ್ ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ನೀಡಿದ್ದಾರೆ. ಆ ದೂರಿನಲ್ಲಿ, “ಸುಚಿತ್ರಾ ಅವರ ಅಶ್ಲೀಲ, ತಪ್ಪು ಹೇಳಿಕೆಗಳು ನನ್ನ ಮಗಳು ಮತ್ತು ಹೆಂಡತಿಯ ಗೌರವಕ್ಕೆ ಧಕ್ಕೆ ತರುತ್ತಿವೆ. ನನ್ನ ಬಗ್ಗೆ ಮತ್ತು ನನ್ನ ಕುಟುಂಬದ ಬಗ್ಗೆ ಅವರು ಬಿಡುಗಡೆ ಮಾಡಿರುವ ವಿಡಿಯೋಗಳು ತಮಿಳು ಚಿತ್ರರಂಗದಲ್ಲಿ ದೊಡ್ಡ ಸಂಚಲನ ಮೂಡಿಸಿವೆ. ನಮ್ಮ ಗೌರವವನ್ನೂ ಪ್ರಶ್ನಾರ್ಹಗೊಳಿಸಿವೆ. ಹಲವು ವರ್ಷಗಳ ಕಠಿಣ ಪರಿಶ್ರಮದಿಂದ ಗಳಿಸಿದ ಈ ಗೌರವವನ್ನು ಸುಚಿತ್ರಾ ಒಂದೇ ನಿಮಿಷದಲ್ಲಿ ಹಾಳು ಮಾಡಿದ್ದಾರೆ. ಆದ್ದರಿಂದ, ಸುಚಿತ್ರಾ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಅಡಿಯಲ್ಲಿ ವಿಚಾರಣೆ ನಡೆಸಬೇಕು” ಎಂದು ತಿಳಿಸಲಾಗಿದೆ.

ಡಿವೋರ್ಸ್‌ ಕಥೆ ಎಲ್ಲಿಗೆ ಬಂತು?

ರವಿ ಮೋಹನ್‌ ಕಡೆಯಿಂದ ತಿಂಗಳಿಗೆ 40 ಲಕ್ಷ ರೂಪಾಯಿ ಜೀವನಾಂಶ ಸಿಗಬೇಕು ಎಂದು ಆರತಿ ಅವರು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಆರತಿ-ರವಿ ಮೋಹನ್‌ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ. ಈ ಜೋಡಿ 18 ವರ್ಷಗಳ ಕಾಲ ಸಂಸಾರ ಮಾಡಿದ್ದು, ಈಗ ಡಿವೋರ್ಸ್‌ ಹಾದಿಯಲ್ಲಿದೆ. ಇನ್ನು ಕೆನಿಷಾ ನನ್ನ ಜೀವನದ ಬೆಳಕು ಎಂದು ರವಿ ಮೋಹನ್‌ ಹೇಳಿದ್ದಾರೆ.