ಅಹಮದಾಬಾದ್‌ ಏರ್ ಇಂಡಿಯಾ ವಿಮಾನ ದುರಂತದಲ್ಲಿ 241 ಮಂದಿ ಸಾವಿಗೀಡಾಗಿದ್ದು, ಓರ್ವ ಪ್ರಯಾಣಿಕ ಮಾತ್ರ ಪಾರಾಗಿದ್ದಾರೆ. ಈ ದುರಂತದಲ್ಲಿ 23 ವರ್ಷದ ಕ್ರಿಕೆಟ್ ಪ್ರತಿಭೆ ಧಿರ್ದ್ ಪಟೇಲ್ ಕೂಡ ಸಾವನ್ನಪ್ಪಿದ್ದಾರೆ. ರು.

ಬೆಂಗಳೂರು: ಅಹಮದಾಬಾದ್‌ ಏರ್‌ ಇಂಡಿಯಾ ವಿಮಾನ ದುರಂತ ಸಂಭವಿಸಿ ನೂರಾರು ಮಂದಿ ಸಾವಿಗೀಡಾದ ಘಟನೆ ನಡೆದ ಒಂದು ವಾರ ಕಳೆಯುತ್ತಾ ಬಂದಿದೆ. ಸಾವಿಗೀಡಾದ ಅಮಾಯಕರ ಬದುಕಿನ ಕುರಿತಂತೆ ದಿನದಿಂದ ದಿನಕ್ಕೆ ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿದ್ದು, ನೋವಿನ ಕಥೆ ಹನುಮನ ಬಾಲದಂತೆ ಬೆಳೆಯುತ್ತಲೇ ಇದೆ.

ಅಹಮದಾಬಾದ್‌ನ ಸರ್ದಾರ್ ವಲ್ಲಭ್‌ಬಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಬೋಯಿಂಗ್ 787 ಡ್ರೀಮ್‌ಲೈನರ್(AI171) ವಿಮಾನವು 230 ಪ್ರಯಾಣಿಕರು ಹಾಗೂ 12 ಸಿಬ್ಬಂದಿಗಳನ್ನು ತುಂಬಿಕೊಂಡು ಟೇಕ್‌ಆಫ್ ಆಗಿತ್ತು. ಆದರೆ ಟೇಕ್ ಆಫ್ ಆದ ಕೆಲವೇ ಸೆಕೆಂಡ್‌ಗಳಲ್ಲಿ ಪತನಗೊಂಡು ವಿಮಾನ ನಿಲ್ದಾಣದ ಸಮೀಪದದಲ್ಲೇ ಇದ್ದ ಮೆಡಿಕಲ್ ಕಾಲೇಜ್ ಕಾಂಪ್ಲೆಕ್ಸ್‌ನಲ್ಲಿ ಪತನಗೊಂಡಿತ್ತು. ಈ ದುರಂತದಲ್ಲಿ ಸುಮಾರು 241 ಮಂದಿ ಪ್ರಾಣ ಕಳೆದುಕೊಂಡಿದ್ದು, ಕೇವಲ ಓರ್ವ ಪ್ರಯಾಣಿಕ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದರು.

ಇನ್ನು ಈ ವಿಮಾನ ದುರಂತದಲ್ಲಿ 23 ವರ್ಷದ ಧಿರ್ದ್ ಪಟೇಲ್ ಎನ್ನುವ ಹಡ್ಡರ್ಸ್‌ಫೀಲ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕೂಡಾ ಕೊನೆಯುಸಿರೆಳೆದಿದ್ದಾರೆ. ಹಡ್ಡರ್ಸ್‌ಫೀಲ್ಡ್ ವಿಶ್ವವಿದ್ಯಾನಿಲಯದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ನಲ್ಲಿ ಎಂಎಸ್ಸಿ ಪದವಿ ಪೂರೈಸಿದ ಬಳಿಕ ಧಿರ್ದ್ ಪಟೇಲ್ ಪ್ರತಿಭಾನ್ವಿತ ಯುವ ಕ್ರಿಕೆಟಿಗನಾಗಿ ಗುರುತಿಸಿಕೊಳ್ಳುವತ್ತ ದಾಪುಗಾಲು ಹಾಕುತ್ತಿದ್ದರು. ಲೀಡ್ಸ್‌ ಮಾಡೆರೇನಿಯಸ್ ಕ್ರಿಕೆಟ್ ಕ್ಲಬ್‌ನ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಗುಜರಾತ್ ಮೂಲದ ಧಿರ್ದ್ ಪಟೇಲ್, ಓರ್ವ ಸ್ಟಾರ್ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದರು. ತಮ್ಮ ಕ್ಲಬ್ ಪರ ಟಿ20 ಕ್ರಿಕೆಟ್ ಮಾದರಿಯಲ್ಲಿ 312 ರನ್ ಹಾಗೂ 29 ವಿಕೆಟ್ ಕಬಳಿಸಿ ಮಿಂಚಿದ್ದರು.

Scroll to load tweet…

 

ಧಿರ್ದ್ ಪಟೇಲ್ ಅವರನ್ನು ಹತ್ತಿರದಿಂದ ಗಮನಿಸುತ್ತಿದ್ದ ಅವರ ಉಪನ್ಯಾಸಕರು ಪ್ರತಿಭಾನ್ವಿತ ವಿದ್ಯಾರ್ಥಿಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಇನ್ನು ಲೀಡ್ಸ್‌ ಮಾಡೆರೇನಿಯಸ್ ಕ್ರಿಕೆಟ್ ಕ್ಲಬ್ ಕೂಡಾ ಧಿರ್ದ್ ಪಟೇಲ್ ನಿಧನಕ್ಕೆ ಸಂತಾಪ ಸೂಚಿಸಿದೆ. ಧಿರ್ದ್ ಪಟೇಲ್ ಅವರ ಕುಟುಂಬಕ್ಕೆ ಹಾಗೂ ಅವರನ್ನು ಬಲ್ಲ ಆಪ್ತರೆಲ್ಲರಿಗೂ ನೋವು ಮರೆಸುವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಟ್ವೀಟ್ ಮಾಡಿದೆ.

ವಿಶ್ವಾಸ್ ಕಾಪಾಡಿದ್ದು ಮುರಿದ ವಿಮಾನದ ಬಾಗಿಲು

ಅಹಮದಾಬಾದ್:ಗುಜರಾತ್‌ ವಿಮಾನದುರಂತದಲ್ಲಿ ಪವಾಡಸದೃಶವಾಗಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್ ರಮೇಶ್ ಅಪಘಾತದಿಂದ

ತಾವು ಪಾರಾದ ರೀತಿಯನ್ನು ವಿವರಿಸಿದ್ದಾರೆ. “ವಿಮಾನದ ಎಡಭಾಗ ದಲ್ಲಿರುವ ತುರ್ತು ಬಾಗಿಲಿನ ಪಕ್ಕದಲ್ಲಿದ್ದ 11ಎ ಸೀಟ್‌ನಲ್ಲಿ ನಾನು ಕುಳಿತಿದ್ದೆ. ವಿಮಾನ

ಟೇಕ್ ಆಫ್ ಆದ ಕೆಲ ಹೊತ್ತಿನಲ್ಲೇ ಅದರೊಳಗಿನ ನೀಲಿ ಮತ್ತು ಬಿಳಿಯ ಬಣ್ಣದ ಲೈಟ್ ಆನ್ ಆದವು. ವಿಮಾನವನ್ನು ಇನ್ನಷ್ಟು ಎತ್ತರಕ್ಕೆ ಏರಿಸಲು ಬೇಕಾದ ಶಕ್ತಿ ಪಡೆಯಲು ಪೈಲಟ್‌ಗಳು ಮುಂದಾಗಿದ್ದಾರೆ ಎಂದು ನಾನು ಭಾವಿಸಿದ್ದೆ. ಆದರೆ ಇದಾದ ಕೆಲ ಕ್ಷಣಗಳಲ್ಲೇ ವಿಮಾನ ಭಾರೀ ಸದ್ದಿನೊಂದಿಗೆ ಕಟ್ಟಡದ ಮೇಲೆ ಅಪ್ಪಳಿಸಿತು. ಈ ವೇಳೆ ವಿಮಾನ 2 ಭಾಗಗಳಾಗಿ ತುಂಡಾಯಿತು. ನಾನು ಕುಳಿತಿದ್ದ ವಿಮಾನದ ಭಾಗ ತುಂಡಾಗಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನ ನೆಲಮಹಡಿಯ ಮೇಲೆ ಬಿತ್ತು.

ಕಣ್ಣುಬಿಡುವಷ್ಟರಲ್ಲಿ ನಾನು ವಿಮಾನದ ಅವಶೇಷಗಳೊಂದಿಗೆ ಕೆಳಗೆ ಬಿದ್ದಿದ್ದೆ. ವಿಮಾನದ ಬಾಗಿಲು ಮುರಿದಿತ್ತು. ಈ ವೇಳೆ ಅಲ್ಲಿಂದ ತೂರಿಕೊ೦ಡು ಹೊರಗೆ ಬಂದೆ. ವಿಮಾನದ ಇನ್ನೊಂದು ಭಾಗದಲ್ಲಿ ಹಾಸ್ಟೆಲ್ ಗೋಡೆ ಇದ್ದ ಕಾರಣ ಬಹುಷಃ ಆ ಕಡೆ ಕುಳಿತವರು ಹೊರಬರಲಾಗಲಿಲ್ಲ. ಇದಾದ ಕೆಲವೇ ಕ್ಷಣಗಳಲ್ಲಿ ಬೆಂಕಿ ಉಂಡೆ ಕಾಣಿಸಿಕೊಂಡಿತು. ನನ್ನ ಕಣ್ಣೆದುರೇ ಅನೇಕರು ಸಾವನ್ನಪ್ಪಿದರು. ನಾನು ಬದುಕಿದ್ದನ್ನು ನಂಬಲಾಗುತ್ತಿಲ್ಲ' ಎಂದು ವಿಶ್ವಾಸ್ ಹೇಳಿದ್ದಾರೆ.

ತುರ್ತು ನಿರ್ಗಮನ ದ್ವಾರದ 11ಎ ಸೀಟ್‌ನಲ್ಲಿ ಕುಳಿತಿದ್ದ ವಿಶ್ವಾಸ್

ಗುಜರಾತ್ ವಿಮಾನ ದುರಂತದಲ್ಲಿ ಅಚ್ಚರಿಯ ರೀತಿಯಲ್ಲಿ ಬದುಕುಳಿದ ವಿಶ್ವಾಸ್ ಕುಮಾರ್ ರಮೇಶ್ ವಿಮಾನದ ಎಕಾನಮಿ ಕ್ಲಾಸ್ ಸೀಟ್‌ಗಳಲ್ಲಿ ಒಂದಾದ “11ಎ'ನಲ್ಲಿ ಕುಳಿತಿದ್ದರು. ಇದು ತುರ್ತು ನಿರ್ಗಮನ ದ್ವಾರದ ಪಕ್ಕದಲ್ಲಿತ್ತು. ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನಗಳ ಎಕಾನಮಿ ಕ್ಲಾಸ್‌ನ ಮೊದಲ ಸಾಲಿನಲ್ಲಿರುವ 6 ಸೀಟ್‌ಗಳಲ್ಲಿ 11ಎ ಕೂಡ ಒಂದು. ಕಿಟಕಿ ಪಕ್ಕದಲ್ಲಿದ್ದ ಈ ಸೀಟ್ ವಿಮಾನದ ತುರ್ತು ಬಾಗಿಲಿನ ಸಮೀಪದಲ್ಲಿತ್ತು. ಆಹಾರ ಪದಾರ್ಥ ಮತ್ತು ಪಾನೀಯಗಳನ್ನು ಶೇಖರಿಸಿಡುವ 'ಗ್ಯಾಲಿ' ಪ್ರದೇಶವೂ ಇದರ ಬಳಿಯೇ ಇತ್ತು. ತುರ್ತು ನಿರ್ಗಮನ ದ್ವಾರದ ಬಳಿಯೇ ಕುಳಿತಿದ್ದರಿಂದ ವಿಶ್ವಾಸ್ ಪವಾಡ ಸದೃಶವಾಗಿ ಪಾರಾಗಲು ಸಾಧ್ಯವಾಯಿತು ಎನ್ನಲಾಗಿದೆ.