ಜೂನ್ 1 ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ನಿಯಮಗಳು ಜಾರಿಯಾಗಲಿವೆ. ಏಕದಿನ ಕ್ರಿಕೆಟ್ನಲ್ಲಿ ಚೆಂಡಿನ ಬಳಕೆ, ಕನ್ಕಶನ್ ಸಬ್ಸ್ಟಿಟ್ಯೂಟ್ ಆಟಗಾರರ ಆಯ್ಕೆ, ಬೌಂಡರಿ ಲೈನ್ ಮತ್ತು ಡಿಆರ್ಎಸ್ ನಿಯಮಗಳಲ್ಲಿ ಬದಲಾವಣೆಗಳನ್ನು ಐಸಿಸಿ ಜಾರಿಗೊಳಿಸಿದೆ.
ದುಬೈ: ಏಕದಿನದಲ್ಲಿ ಚೆಂಡಿನ ಮಿತಿ, ಕನ್ಕಶನ್ ಸಬ್ಸ್ಟಿಟ್ಯೂಟ್ (ತಲೆಗೆ ಏಟು ಬಿದ್ದಾಗ ಆಟಗಾರನ ಬದಲಾವಣೆ) ಸೇರಿ ಕೆಲ ಹೊಸ ನಿಯಮಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯು ಜೂನ್ 1ರಿಂದಲೇ ಜಾರಿಗೊಳಿಸಲಿದೆ.
ಸದ್ಯ ಏಕದಿನ ಕ್ರಿಕೆಟ್ನಲ್ಲಿ ಕ್ರೀಸ್ನ ಎರಡು ಕಡೆಗಳಿಂದಲೂ 2 ಚೆಂಡುಗಳನ್ನು ಏಕಕಾಲದಲ್ಲಿ ಬಳಸಲಾಗುತ್ತಿದೆ. ಅಂದರೆ ಒಂದು ಚೆಂಡಿನಿಂದ ತಲಾ 25 ಓವರ್ ಎಸೆಯಲಾಗುತ್ತದೆ. ಆದರೆ ಹೊಸ ನಿಯಮ ಪ್ರಕಾರ, 2 ಚೆಂಡುಗಳಿಂದ ಇನ್ನಿಂಗ್ಸ್ ಆರಂಭಿಸಿದರೂ 25 ಓವರ್ ಬಳಿಕ ಒಂದೇ ಚೆಂಡನ್ನು ಬಳಸಲು ಅವಕಾಶ ನೀಡಲಾಗುತ್ತದೆ. ಯಾವ ಚೆಂಡನ್ನು ಬಳಸಬೇಕು ಎಂಬುದನ್ನು ಬೌಲಿಂಗ್ ತಂಡವೇ ನಿರ್ಧರಿಸಲಿದೆ.
ಇನ್ನು, ಕನ್ಕಶನ್ ಸಬ್ಸ್ಟಿಟ್ಯೂಟ್ಗಳಾಗಿ ಆಡುವ ಐದು ಸಂಭಾವ್ಯ ಆಟಗಾರರ ಹೆಸರನ್ನು ಟಾಸ್ ಸಮಯದಲ್ಲೇ ನೀಡಬೇಕು ಎಂದು ನಿಯಮ ರೂಪಿಸಲಾಗಿದೆ. ಇದರಲ್ಲಿ ತಲಾ ಒಬ್ಬ ವಿಕೆಟ್ ಕೀಪರ್, ಬ್ಯಾಟರ್, ವೇಗಿ, ಸ್ಪಿನ್ನರ್, ಆಲ್ರೌಂಡರ್ ಇರಬೇಕು. ಅಲ್ಲದೆ, ಬೌಂಡರಿ ಲೈನ್, ಡಿಆರ್ಎಸ್ ನಿಯಮದಲ್ಲೂ ಕೆಲ ಬದಲಾವಣೆ ಮಾಡಲಾಗಿದ್ದು, ಈ ಬಗ್ಗೆ ಬಿಸಿಸಿಐ ಇನ್ನಷ್ಟೇ ಮಾಹಿತಿ ನೀಡಬೇಕಿದೆ.
ಹೊಸ ನಿಯಮಗಳು ಟೆಸ್ಟ್ನಲ್ಲಿ ಈಗಲೇ ಜಾರಿಗೊಳ್ಳಲಿದೆ. ಜೂ.11ರಿಂದ ಆರಂಭ ಗೊಳ್ಳಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಹೊಸ ನಿಯಮ ಚಾಲ್ತಿಯಲ್ಲಿರಲಿದೆ. ಏಕದಿನ, ಟಿ20 ಕ್ರಿಕೆಟ್ನಲ್ಲಿ ಜುಲೈನಲ್ಲಿ ಜಾರಿಗೊಳ್ಳಲಿದೆ.
ಕರುಣ್ ನಾಯರ್ ದ್ವಿಶತಕ: ಭಾರತ 557
ಕ್ಯಾ೦ಟರ್ಬರಿ: ಕನ್ನಡಿಗ ಕರುಣ್ ನಾಯರ್ ಭರ್ಜರಿ ಶತಕದ ನೆರವಿನಿಂದ ಇಂಗ್ಲೆಂಡ್ ಲಯನ್ಸ್ ವಿರುದ್ಧ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ 'ಎ' ತಂಡ ಬೃಹತ್ ಮೊತ್ತ ಕಲೆಹಾಕಿದೆ. ತಂಡ 2ನೇ ದಿನವಾದ ಶನಿವಾರ 557 ರನ್ಗೆ ಆಲೌಟಾಯಿತು. ಮೊದಲ ದಿನ 182 ರನ್ ಗಳಿಸಿ ಕ್ರೀಸ್ನಲ್ಲಿದ್ದ ಕರುಣ್ 281 ಎಸೆತಕ್ಕೆ 26 ಬೌಂಡರಿ, 1 ಸಿಕ್ಸರ್ನೊಂದಿಗೆ 204 ರನ್ ಗಳಿಸಿ ಔಟಾದರು. ಧ್ರುವ್ ಜುರೆಲ್ (94) ಶತಕದ ಅಂಚಿನಲ್ಲಿ ಎಡವಿದರು. ಬಳಿಕ ಹರ್ಷ ದುಬೆ 32,
ಶಾರ್ದೂಲ್ ಠಾಕೂರ್ 27, ಅನ್ಶೂಲ್ ಕಂಬೋಜ್ 23 ರನ್ ಕೊಡುಗೆ ನೀಡಿದರು. ಬಳಿಕ ಇನ್ನಿಂಗ್ಸ್ ಆರಂಭಿಸಿದ ಲಯನ್ಸ್ ಉತ್ತಮ ಆರಂಭ ಪಡೆಯಿತು. ತಂಡ 2 ವಿಕೆಟ್ ನಷ್ಟದಲ್ಲಿ 237 ರನ್ ಗಳಿಸಿದ್ದು, 320 ರನ್ ಹಿನ್ನಡೆಯಲ್ಲಿದೆ.
ಇಂಗ್ಲೆಂಡ್ ಟೆಸ್ಟ್: ಭಾರತಕ್ಕೆ ಯುಧುವೀರ್ ಮ್ಯಾನೇಜರ್
ನವದೆಹಲಿ: ಜೂನ್ 20ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಭಾರತ ತಂಡದ ವ್ಯವಸ್ಥಾಪಕರಾಗಿ ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ (ಯುಪಿಸಿಎ)ಯ ಯಧುವೀರ್ ಸಿಂಗ್ ನೇಮಕಗೊಂಡಿದ್ದಾರೆ. ಸದ್ಯ ಯುಪಿಸಿಎ ಆಜೀವ ಸದಸ್ಯರಾಗಿರುವ ಯುದ್ವೀರ್ ಭಾರತ ತಂಡದ ಜೊತೆ ಇಂಗ್ಲೆಂಡ್ಗೆ ಪ್ರಯಾಣಿಸಲಿದ್ದಾರೆ.
ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಗೆ 18 ಮಂದಿಯ ಭಾರತ ತಂಡವನ್ನು ಶನಿವಾರ ಪ್ರಕಟಿಸಲಾಗಿತ್ತು. ಇದರಲ್ಲಿ ಅನನುಭವಿಗಳೇ ಹೆಚ್ಚಿದ್ದಾರೆ. 10 ಆಟಗಾರರು ಇದೇ ಮೊದಲ ಬಾರಿ ಇಂಗ್ಲೆಂಡ್ನಲ್ಲಿ ಟೆಸ್ಟ್ ಆಡಲು ಸಜ್ಜಾಗಿದ್ದಾರೆ.
ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:
ಶುಭ್ಮನ್ ಗಿಲ್(ನಾಯಕ), ರಿಷಭ್ ಪಂತ್(ಉಪನಾಯಕ& ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೇಲ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ದೀಪ್ ಸಿಂಗ್, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್.