ನವಜೋತ್ ಸಿಂಗ್ ಸಿಧು 2025ರ ಐಪಿಎಲ್‌ನ ಬಲಿಷ್ಠ ತಂಡವನ್ನು ಪ್ರಕಟಿಸಿದ್ದಾರೆ. ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದು, ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. ರೋಹಿತ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್‌ ಕೌಶಲ್ಯವನ್ನು ಸಿಧು ಶ್ಲಾಘಿಸಿದ್ದಾರೆ.

ಮುಂಬೈ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯಗೊಂಡು ಒಂದು ವಾರ ಕಳೆಯುತ್ತಾ ಬಂದಿದ್ದರೂ, ಮಿಲಿಯನ್ ಡಾಲರ್ ಟಿ20 ಕ್ರಿಕೆಟ್ ಲೀಗ್ ಕುರಿತಾದ ಚರ್ಚೆಗಳು ಮಾತ್ರ ನಿಂತಿಲ್ಲ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ನವಜೋತ್ ಸಿಂಗ್ ಸಿಧು, 2025ನೇ ಸಾಲಿನ ಬಲಿಷ್ಠ ಐಪಿಎಲ್ ತಂಡವನ್ನು ಪ್ರಕಟಿಸಿದ್ದಾರೆ. ತುಂಬಾ ಅಚ್ಚರಿಯ ಸಂಗತಿಯೆಂದರೇ, 2025ನೇ ಸಾಲಿನ ಐಪಿಎಲ್‌ ಟೂರ್ನಿಯಲ್ಲಿ ನಾಯಕನಾಗಿರದ ಆಟಗಾರನನ್ನು ನಾಯಕನನ್ನಾಗಿ ನೇಮಿಸಿದ್ದಾರೆ.

ಹೌದು, ನವಜೋತ್ ಸಿಂಗ್ ಸಿಧು ಆಯ್ಕೆ ಮಾಡಿದ ಟೀಂ ಆಫ್ ದಿ ಟೂರ್ನಮೆಂಟ್‌ಗೆ ನಾಯಕನಾಗಿ ರೋಹಿತ್ ಶರ್ಮಾ ಅವರನ್ನು ಆಯ್ಮೆ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ರೋಹಿತ್ ಶರ್ಮಾ ನಾಯಕನಾಗಿರದೇ, ಕೇವಲ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕ ಪಟ್ಟ ಕಟ್ಟಿದೆ. ಇನ್ನು ರೋಹಿತ್ ಶರ್ಮಾ, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಕ್ಯಾಪ್ಟನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದೀಗ ಅಹಮದಾಬಾದ್‌ನಲ್ಲಿ ನಡೆದ 2025ರ ಐಪಿಎಲ್ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ಎದುರು ಆರ್‌ಸಿಬಿ ತಂಡವು ಆರು ರನ್ ಅಂತರದ ರೋಚಕ ಜಯ ಸಾಧಿಸಿ ಟ್ರೋಫಿ ಬರ ನೀಗಿಸಿಕೊಂಡ ಬೆನ್ನಲ್ಲೇ ಸಿಧು, ಈ ಆವೃತ್ತಿಯ ಬಲಿಷ್ಠ ತಂಡವನ್ನು ಪ್ರಕಟಿಸಿದ್ದಾರೆ.

ಇನ್ನು ಯುವ ಆಟಗಾರರನ್ನೊಳಗೊಂಡ ತಂಡವನ್ನು ಕಟ್ಟಿಕೊಂಡು ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ ತಂಡವನ್ನು 11 ವರ್ಷಗಳ ಬಳಿಕ ಐಪಿಎಲ್‌ ಫೈನಲ್‌ಗೇರಿಸಿದ್ದರು. ಆಟಗಾರನಾಗಿ ಹಾಗೂ ನಾಯಕನಾಗಿ ಶ್ರೇಯಸ್ ಅಯ್ಯರ್ ಯಶಸ್ವಿಯಾಗಿದ್ದರು. ಹೀಗಿದ್ದೂ ಶ್ರೇಯಸ್ ಅಯ್ಯರ್ ಅವರಿಗೆ ಸಿಧು ತಂಡದಲ್ಲಿ ನಾಯಕ ಪಟ್ಟ ನೀಡದೆ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪಂಜಾಬ್ ಕಿಂಗ್ಸ್ ತಂಡದಲ್ಲಿ ಕೆಲವು ಪ್ರಮುಖ ಅಂತಾರಾಷ್ಟ್ರೀಯ ಕ್ರಿಕೆಟಿಗರಿದ್ದರು. ಆದರೆ ಅನ್‌ಕ್ಯಾಪ್ಡ್‌ ಆಟಗಾರರಾದ ಪ್ರಭ್‌ಸಿಮ್ರನ್ ಸಿಂಗ್, ಪ್ರಿಯಾನ್ಶ್‌ ಆರ್ಯ ಅವರಲ್ಲಿ ಆತ್ಮವಿಶ್ವಾಸ ತುಂಬಿ ಬಲಿಷ್ಟ ತಂಡಗಳಿಗೆ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಕುರಿತಂತೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿವೆ.

ರೋಹಿತ್ ಶರ್ಮಾ ಬೆಸ್ಟ್ ಏಕೆಂದು ವಿವರಿಸಿದ ಸಿಧು:

ಇದೆಲ್ಲದರ ಹೊರತಾಗಿಯೂ ನವಜೋತ್ ಸಿಂಗ್ ಸಿಧು, ರೋಹಿತ್ ಶರ್ಮಾ ಈ ಆವೃತ್ತಿಯ ಬಲಿಷ್ಠ ತಂಡಕ್ಕೆ ಅತ್ಯುತ್ತಮ ನಾಯಕ ಎಂದು ಬಣ್ಣಿಸಿದ್ದಾರೆ. ಮುಂಬೈ ಇಂಡಿಯನ್ಸ್‌ಗೆ 5 ಐಪಿಎಲ್ ಟ್ರೋಫಿ ಗೆದ್ದುಕೊಟ್ಟಿರುವ ನಾಯಕ ರೋಹಿತ್ ಶರ್ಮಾ, 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು 81 ರನ್‌ಗಳ ಸ್ಪೋಟಕ ಇನ್ನಿಂಗ್ಸ್ ಆಡಿದ್ದರು. ಈ ಆವೃತ್ತಿಯ ಐಪಿಎಲ್ ಟೂರ್ನಿಯ ಬಹುತೇಕ ಪಂದ್ಯದಲ್ಲಿ ರೋಹಿತ್ ಶರ್ಮಾ 149.28ರ ಸ್ಟ್ರೈಕ್‌ರೇಟ್‌ನಲ್ಲಿ 418 ರನ್ ಸಿಡಿಸಿದ್ದರು.

ಇನ್ನುಳಿದಂತೆ ನವಜೋತ್ ಸಿಂಗ್ ಸಿಧು ಆಯ್ಕೆ ಮಾಡಿದ ಬಲಿಷ್ಠ ತಂಡದಲ್ಲಿ ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿಗೆ ಆರಂಭಿಕರಾಗಿ ಸ್ಥಾನ ನೀಡಿದ್ದಾರೆ. ಇನ್ನು ಅಗ್ರಕ್ರಮಾಂಕದಲ್ಲಿ ಜೋಸ್ ಬಟ್ಲರ್ ಹಾಗೂ ಶ್ರೇಯಸ್ ಅಯ್ಯರ್‌ಗೆ ಸ್ಥಾನ ನೀಡಿದ್ದಾರೆ. ಇನ್ನ ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಯ್ಕೆ ಮಾಡಿಕೊಂಡಿದ್ದರು, ಆಲ್ರೌಂಡರ್ ರೋಪದಲ್ಲಿ ಪಾಂಡ್ಯ ಬ್ರದರ್ಸ್‌ಗೆ ಸ್ಥಾನ ನೀಡಿದ್ದಾರೆ. ಇನ್ನು ಸಿಎಸ್‌ಕೆ ಪರ ಮಿಂಚಿನ ಸ್ಪಿನ್ ದಾಳಿ ನಡೆಸಿದ್ದ ನೂರ್ ಅಹಮದ್, ಪ್ರಸಿದ್ದ್ ಕೃಷ್ಣ, ಜಸ್ಪ್ರೀತ್ ಬುಮ್ರಾ ಹಾಗೂ ಆರ್‌ಸಿಬಿ ವೇಗಿ ಜೋಶ್ ಹೇಜಲ್‌ವುಡ್ ಸ್ಥಾನ ಪಡೆದಿದ್ದಾರೆ.