ಬೆಂಗಳೂರಿನಲ್ಲಿ ಸೂಟ್ಕೇಸ್ನಲ್ಲಿ ಪತ್ತೆಯಾದ 17 ವರ್ಷದ ಯುವತಿಯ ಶವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ಸೂಟ್ಕೇಸ್ನಲ್ಲಿ 17 ವರ್ಷದ ಯುವತಿಯ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಚಂದಾಪುರದ ರೈಲ್ವೆ ಬ್ರಿಡ್ಜ್ ಬಳಿ ಹರಿದು ಹೋಗಿದ್ದ ನೀಲಿ ಬಣ್ಣದ ಸೂಟ್ಕೇಸ್ನಲ್ಲಿ 17 ವರ್ಷದ ಯುವತಿಯ ಶವ ಪತ್ತೆಯಾಗಿತ್ತು. ಕೊಲೆಯಾದ ಯುವತಿಯನ್ನು ರೀಮಾ ಎಂದು ಗುರುತಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸೂರ್ಯನಗರದ ಪೊಲೀಸರು, 7 ಆರೋಪಿಗಳನ್ನು ಬಿಹಾರದಲ್ಲಿ ಪತ್ತೆ ಮಾಡಿದ್ದು, ಅವರನ್ನು ಬೆಂಗಳೂರಿಗೆ ಕರೆ ತರುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಬಂಧಿತ ಆರೋಪಿಗಳೆಲ್ಲರೂ ಬಿಹಾರದ ನವಾಡ ಜಿಲ್ಲೆಯವರು ಎಂದು ತಿಳಿದು ಬಂದಿದೆ. ಏಳು ಆರೋಪಿಗಳಲ್ಲಿ ಮೂವರನ್ನು ಆಶಿಕ್ ಕುಮಾರ್, ಮುಖೇಶ್ ಮತ್ತು ರಾಜಾರಾಮ್ ಮೋಹನ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ ಆರೋಪಿಗಳಲ್ಲಿ ಒಬ್ಬನಾದ ಆಶಿಕ್ ಕುಮಾರ್ ವಿವಾಹಿತನಾಗಿದ್ದು, ಇಬ್ಬರು ಮಕ್ಕಳಿದ್ದಾರೆ.
ಮೇ 21 ರಂದು, ಬೆಂಗಳೂರಿನ ಹಳೆಯ ಚಂದಾಪುರ ರೈಲ್ವೆ ಸೇತುವೆಯ ಬಳಿ ಹರಿದ ನೀಲಿ ಬಣ್ಣದ ಸೂಟ್ಕೇಸ್ ಪತ್ತೆಯಾಗಿತ್ತು ಅದನ್ನು ತೆರೆದು ನೋಡಿದಾಗ ಅದರಲ್ಲಿ 17 ವರ್ಷದ ಹುಡುಗಿಯ ಶವ ಕಂಡು ಬೆಚ್ಚಿಬಿದ್ದ ಜನ ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿಗಳನ್ನು ಪ್ರಾಥಮಿಕ ತನಿಖೆ ನಡೆಸಿದಾಗ ಯುವತಿಯನ್ನು ಬೇರೆಡೆ ಕೊಲೆ ಮಾಡಿ ನಂತರ ಶವವನ್ನು ಸೂಟ್ಕೇಸ್ನಲ್ಲಿ ತುಂಬಿ ಚಲಿಸುವ ರೈಲಿನಿಂದ ಹೊರಗೆ ಎಸೆಯಲಾಗಿದೆ. ಬಾಲಕಿಯನ್ನು ಬೇರೆಡೆ ಕೊಲ್ಲಲಾಗಿದ್ದರೂ, ಆರೋಪಿಯು ಆಕೆಯ ಶವವನ್ನು ಸೂಟ್ಕೇಸ್ನಲ್ಲಿ ತುಂಬಿಸಿ ಕ್ಯಾಬ್ನಲ್ಲಿ ರೈಲ್ವೆ ಹಳಿಗಳ ಬಳಿ ಸಾಗಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತ ಕೊಲೆಯಾದ ರೀಮಾ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಾಗಿದ್ದರಿಂದ ಈ ಹಿಂದೆಯೇ ಕರ್ನಾಟಕದಾದ್ಯಂತ ಸಂತ್ರಸ್ತೆಗಾಗಿ ಅನೇಕ ನಾಪತ್ತೆ ನೋಟಿಸ್ಗಳನ್ನು ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಾವು ನಮ್ಮ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಅಂತಹ ಪ್ರಕರಣಗಳು ಸಾಮಾನ್ಯವಾಗಿ ರೈಲ್ವೆ ಪೊಲೀಸರ ವ್ಯಾಪ್ತಿಗೆ ಬರುತ್ತವೆಯಾದರೂ, ಘಟನೆಯು ನಮ್ಮ ಪ್ರದೇಶಕ್ಕೆ ಸಂಬಂಧಿಸಿರಬಹುದು ಎಂಬ ಕಾರಣದಿಂದ ನಾವು ಭಾಗಿಯಾಗಿದ್ದೇವೆ. ಸೂಟ್ಕೇಸ್ನಲ್ಲಿ ಶವ ಮಾತ್ರ ಇತ್ತು. ಯಾವುದೇ ಗುರುತಿನ ಚೀಟಿ ಅಥವಾ ವೈಯಕ್ತಿಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಬೆಂಗಳೂರು ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಸಿಕೆ ಬಾಬಾ ಹೇಳಿದ್ದಾರೆ.