ಇಂದೋರ್ ರಾಜ ರಘುವಂಶಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಷ್ಯ ಹೊರ ಬರ್ತಿದೆ. ಈಗಾಗಲೇ ಸೋನಂ ಬಂಧನವಾಗಿದೆ. ಜ್ಯೋತಿಷಿ ಭವಿಷ್ಯ ಎಲ್ಲರ ಗಮನ ಸೆಳೆದಿದೆ.
ಮಧ್ಯಪ್ರದೇಶ (Madhya Pradesh)ದ ಇಂದೋರ್ನಲ್ಲಿ ಸಾರಿಗೆ ಉದ್ಯಮಿ ರಾಜ ರಘುವಂಶಿ (Raja Raghuvanshi) ಹತ್ಯೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ರಾಜ ಹತ್ಯೆಯಲ್ಲಿ ಪತ್ನಿ ಸೋನಂ ರಘುವಂಶಿ ಕೈವಾಡವಿರೋದು ಬಯಲಾಗಿದೆ. ಪೊಲೀಸರು ಸೋನಂ ರಘುವಂಶಿಯನ್ನು ವಶಕ್ಕೆ ಪಡೆದಿದ್ದಾರೆ. ಸೋನಂ ಉತ್ತರ ಪ್ರದೇಶದ ಢಾಬಾವೊಂದರಲ್ಲಿ ಪೊಲೀಸರಿಗೆ ಶರಣಾಗಿದ್ದಾಳೆ. ಈ ಪ್ರಕರಣದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ವ್ಯಕ್ತಿ ಜ್ಯೋತಿಷಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೋತಿಷಿ ನುಡಿದಿದ್ದ ಎರಡೂ ಭವಿಷ್ಯ ನಿಜವಾಗಿವೆ. ಸೋನಂ ರಘುವಂಶಿ ತಂದೆ ದೇವಿಸಿಂಗ್ ಈ ವಿಷ್ಯವನ್ನು ಬಹಿರಂಗಪಡಿಸಿದ್ದಾರೆ.
ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದ ಜ್ಯೋತಿಷಿ : ಸೋನಂ ತಂದೆ ದೇವಿಸಿಂಗ್ ಪ್ರಕಾರ, ಇವರಿಬ್ಬರದ್ದು ಅರೇಂಜ್ಡ್ ಮ್ಯಾರೇಜ್. ಮೆಟ್ರಿಮೋನಿಯಲ್ಲಿ ಸೋನಂಗೆ ವರನನ್ನು ಹುಡುಕಲಾಗಿತ್ತು. ಇಬ್ಬರ ಜಾತಕದಲ್ಲೂ ಮಂಗಳ ಒಂದೇ ಮನೆಯಲ್ಲಿತ್ತು. ಜ್ಯೋತಿಷಿ ಎಲ್ಲವೂ ಸರಿಯಾಗಿದೆ ಎಂದ ನಂತ್ರ ಮದುವೆ ನಡೆದಿತ್ತು. ಜಾತಕ ನೋಡಿದ್ದ ಜ್ಯೋತಿಷಿಗಳು, ಮದುವೆ ನಂತ್ರ ಒಂದೂವರೆ ತಿಂಗಳು ವಧು ಮನೆಯಿಂದ ಹೊರಗೆ ಹೋಗ್ಬಾರದು ಅಂತ ಎಚ್ಚರಿಕೆ ನೀಡಿದ್ದರು. ಆದ್ರೆ ಸೋನಂ ಹಾಗೂ ರಘುವಂಶಿ ಇದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ.
ಹನಿಮೂನ್ಗೆ ಹೊರಡುವ ಒಂದು ದಿನ ಮೊದಲು ರಾಜ ತನ್ನ ಕುಟುಂಬಸ್ತರಿಗೆ ಹನಿಮೂನ್ ಬಗ್ಗೆ ಹೇಳಿದ್ದ. ಕುಟುಂಬದವರು ಜ್ಯೋತಿಷಿ ಜೊತೆ ಈ ಬಗ್ಗೆ ಮಾತನಾಡಿದ್ದರು. ಈ ಸಮಯದಲ್ಲಿ ಜ್ಯೋತಿಷಿ, ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದರು. ಇದ್ರಿಂದ ಮನಸ್ಸು ತಳಮಳಗೊಂಡಿತ್ತಾದ್ರೂ ಎಲ್ಲ ವಿಷ್ಯಕ್ಕೆ ತಲೆ ಕೆಡಿಸಿಕೊಳ್ಬಾರದು ಎನ್ನುವ ಕಾರಣಕ್ಕೆ ಸುಮ್ಮನಾಗಿದ್ದೆ ಎಂದು ಸೋನಂ ತಂದೆ ಹೇಳಿದ್ದಾರೆ.
ಜ್ಯೋತಿಷಿಗಳು ಹೇಳಿದಂತೆ ಕೊನೆಗೂ ಸಿಕ್ಕ ಸೋನಂ : ಹನಿಮೂನ್ ಗೆ ಹೋಗಿದ್ದ ಸೋನಂ ಹಾಗೂ ರಾಜ ಮೇ. 23 ರಂದು ನಾಪತ್ತೆಯಾಗಿದ್ರು. ಅವರ ಹುಡುಕಾಟ ಮುಂದುವರೆದಿತ್ತು. ಜೂನ್ 2ರಂದು ರಾಜನ ಶವ ಪತ್ತೆಯಾಗಿತ್ತು. ಆದ್ರೆ ಸೋನಂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕರಲಿಲ್ಲ. ಈ ವೇಳೆ ತಂದೆ ಮತ್ತೆ ತನ್ನ ಜ್ಯೋತಿಷಿಯನ್ನು ಕೇಳಿದ್ದಾರೆ. ಜ್ಯೋತಿಷಿ ತಲೆಕೆಳಗಾದ ಚಿತ್ರವನ್ನು ಮನೆಯ ಹೊರಗೆ ನೇತು ಹಾಕಿದ್ರೆ ಮಗಳು ಹಿಂತಿರುಗುತ್ತಾಳೆ ಎಂದಿದ್ದಾರೆ. ಸೋನಂ ತಂದೆ ಹಾಗೇ ಮಾಡಿದ್ದಾರೆ. ಫೋಟೋ ನೇತು ಹಾಕಿ ಎರಡು ದಿನಗಳ ನಂತ್ರ ಸೋನಂ ಹಿಂತಿರುಗಿದ್ದಾಳೆ ಎಂದು ಜ್ಯೋತಿಷಿ ಬಗ್ಗೆ ಸೋನಂ ತಂದೆ ಹೇಳಿದ್ದಾರೆ.
ಏನು ಪ್ರಕರಣ ? : ಇಂದೋರ್ ಉದ್ಯಮಿ ರಾಜ ರಘುವಂಶಿ, ಸೋನಂ ಕೈ ಹಿಡಿದಿದ್ದರು. ಮೇ 20 ರಂದು, ಸೋನಮ್ ಮತ್ತು ರಾಜಾ ರಘುವಂಶಿ ಹನಿಮೂನ್ಗಾಗಿ ಮೇಘಾಲಯಕ್ಕೆ ಬಂದಿದ್ದರು. ಅಲ್ಲಿ ಅವರು ಕಾಣೆಯಾಗಿದ್ರು. ಜೂನ್ 2 ರಂದು, ರಾಜ ಶವ ಕಂದಕದಲ್ಲಿ ಪತ್ತೆಯಾಗಿತ್ತು. ಸೋನಂ ಸಿಕ್ಕಿರಲಿಲ್ಲ. ಸೋನಂ ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯ ನಂದಗಂಜ್ ಪೊಲೀಸ್ ಠಾಣೆಗೆ ನಿನ್ನೆ ಶರಣಾಗಿದ್ದಾಳೆ. ಹತ್ಯೆಯಲ್ಲಿ ಭಾಗಿಯಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. . ಬಂಧಿತ ಆರೋಪಿಗಳಲ್ಲಿ ವಿಕ್ಕಿ ಠಾಕೂರ್, ಆನಂದ್ ಮತ್ತು ರಾಜ್ ಕುಶ್ವಾಹ ಸೇರಿದ್ದಾರೆ. ಸೋನಂ ರಘುವಂಶಿ ಪದೇ ಪದೇ ರಾಜ್ ಕುಶ್ವಾಹಗೆ ಫೋನ್ ಮಾಡ್ತಿದ್ದಳು ಎನ್ನಲಾಗಿದೆ.
ಮಗಳು ತಪ್ಪು ಮಾಡಿಲ್ಲ : ಸೋನಂ ಪ್ರೇಮ ಸಂಬಂಧವೇ ರಾಜನ ಹತ್ಯೆಗೆ ಕಾರಣ ಎನ್ನುವ ಆರೋಪ ಕೇಳಿ ಬರ್ತಿದೆ. ಎಲ್ಲವನ್ನು ಸೋನಂ ಪ್ಲಾನ್ ಪ್ರಕಾರ ಮಾಡಿದ್ದಳು ಎನ್ನಲಾಗ್ತಿದೆ. ರಾಜನನ್ನು ಹನಿಮೂನ್ ಗೆ ಹೋಗಲು ಒತ್ತಾಯ ಮಾಡಿದ್ದ ಸೋನಂ, ತಾನೇ ಜಾಗ ನಿರ್ಧರಿಸಿದ್ದಳು ಅಂತ ರಾಜನ ಅಮ್ಮ ಆರೋಪ ಮಾಡಿದ್ದಾರೆ. ಆದ್ರೆ ಇದನ್ನು ಒಪ್ಪಿಕೊಳ್ಳಲು ಸೋನಂ ತಂದೆ ಸಿದ್ಧವಿಲ್ಲ. ಮಗಳು ನಿರಪರಾಧಿ. ಆಕೆಯನ್ನು ಈ ಪ್ರಕರಣದಲ್ಲಿ ಬಲಿಪಶು ಮಾಡಲಾಗ್ತಿದೆ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ.