ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಸ್ನೇಹಾ ಪಾತ್ರದ ಮೂಲಕ ಮನೆಮನ ಗೆದ್ದಿದ್ದ ನಟಿ ಸಂಜನಾ ಬುರ್ಲಿ, ಏಕಾಏಕಿ ಸೀರಿಯಲ್ ಬಿಟ್ಟು ಹೋಗಿದ್ದರಿಂದ ಈಗ ಕೊರಗ್ತಾ ಇದ್ದಾರಾ? ನಟಿ ಹೇಳಿದ್ದೇನು?
ಸ್ನೇಹಾ ಎಂದರೆ ಪುಟ್ಟಕ್ಕನ ಮಕ್ಕಳು ನಟಿ ಸಂಜನಾ ಬುರ್ಲಿ ಎಲ್ಲರ ನೆನಪಿಗೇ ಬರುತ್ತಿದ್ದಾರೆ. ನಟಿ ಉನ್ನತ ವ್ಯಾಸಂಗದ ಕಾರಣ ಕೊಟ್ಟು ಸೀರಿಯಲ್ನಿಂದ ಹೊರಕ್ಕೆ ಬಂದಿದ್ದಾರೆ. ಅವರು ಹೊರಕ್ಕೆ ಬರುವುದು ತಿಳಿದ ಕಾರಣ ಸ್ನೇಹಾ ಪಾತ್ರವನ್ನೇ ಸಾಯಿಸಲಾಗಿದೆ. ಇದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲಿಂದ ಸೀರಿಯಲ್ ಹಂತ ಹಂತವಾಗಿ ಟಿಆರ್ಪಿ ಕಳೆದುಕೊಳ್ಳಲು ಶುರು ಮಾಡಿತ್ತು. ಸಿಕ್ಕಾಪಟ್ಟೆ ಓದಿರುವ ಸ್ನೇಹಾ ಹಾಗೂ ರೌಡಿಯಾಗಿರುವ ಕಂಠಿಯ ಲವ್ಸ್ಟೋರಿ ವೀಕ್ಷಕರಿಗೆ ಸಕತ್ ಇಷ್ಟವಾಗಿತ್ತು. ಒಂದು ಪಾತ್ರದಲ್ಲಿ ಒಬ್ಬರನ್ನೇ ಕೆಲ ವರ್ಷ ನೋಡಿದ ಬಳಿಕ, ಆ ಪಾತ್ರದಲ್ಲಿ ಬೇರೆಯವರನ್ನು ವೀಕ್ಷಕರು ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳುವುದಿಲ್ಲ ಎಂದು ಸ್ನೇಹಾ ಪಾತ್ರವನ್ನು ಸಾಯಿಸಲಾಗಿದೆ ಎಂದು ನಿರ್ದೇಶಕ ಆರೂರು ಜಗದೀಶ್ ಹೇಳಿದರು. ಆದರೆ ಸ್ನೇಹಾ ಪಾತ್ರಕ್ಕೆ ಬೇರೆ ನಟಿಯನ್ನು ಕರೆತಂದು, ಅದೇ ಕಥೆಯನ್ನು ಮುಂದುವರೆಸಬಹುದಿತ್ತು ಎನ್ನುವುದು ವೀಕ್ಷಕರ ಅಭಿಮತ.
ಇದೀಗ ಸ್ನೇಹಾ ಪಾತ್ರಧಾರಿಯಾಗಿದ್ದ ಸಂಜನಾ ಬುರ್ಲಿ ಅವರು, ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇದ್ದಾರೆ. ಅವರು ರೀಲ್ಸ್ ಮಾಡುತ್ತಿದ್ದಾರೆ. ಇದರ ನಡುವೆಯೇ ಇದೀಗ ರೆಡ್ಎಫ್ಎಂ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಸೀರಿಯಲ್ ಬಗ್ಗೆ ಮಾತನಾಡಿದ್ದಾರೆ. ಪುಟ್ಟಕ್ಕನ ಮಕ್ಕಳು ಸೀರಿಯಲ್ ಬಿಟ್ಟ ಬಗ್ಗೆ ಈಗ ಏನು ಅನ್ನಿಸ್ತಾ ಇದೆಯಾ ಎನ್ನುವ ಪ್ರಶ್ನೆಗೆ ಸಂಜನಾ ಬುರ್ಲಿ ಉತ್ತರ ಕೊಟ್ಟಿದ್ದಾರೆ. 'ನಿಜ ಹೇಳಲಾ' ಎನ್ನುತ್ತಲೇ ಸಂಜನಾ, 'ನಿಜವಾಗಿಯೂ ಕೊರಗು ಅಂತೇನೂ ಇಲ್ಲ. ಏಕೆಂದರೆ, ಈ ನಿರ್ಧಾರವನ್ನು ನಾನು ಸಡನ್ ಆಗಿ ತೆಗೆದುಕೊಂಡಿರುವುದು ಅಲ್ಲ. ಒಂದು ವರ್ಷ ಯೋಚನೆ ಮಾಡಿ ನಿರ್ಧರಿಸಿರುವುದು. ಯಾವುದೋ ಒಂದು ಗುರಿ ಇಟ್ಟುಕೊಂಡು ಆ ಬಗ್ಗೆ ನಿರ್ಧರಿಸಿದ್ದೆ. ಆದ್ದರಿಂದ ಸೀರಿಯಲ್ ಬಿಟ್ಟ ಬಗ್ಗೆ ನೋವು ಇಲ್ಲ. ನಾನು ಕಳೆದ ಆ ಮೂರು ವರ್ಷಗಳ ಮೆಲುಕು ಹಾಕುತ್ತಾ ಆ ದಿನಗಳನ್ನು ನೆನೆಯುತ್ತಿರುತ್ತೇನೆ. ಪುಟ್ಟಕ್ಕನ ಮಕ್ಕಳು ಪ್ರಾಜೆಕ್ಟ್ನಲ್ಲಿ ಕಳೆದ ಕ್ಷಣಗಳು ತುಂಬಾ ಖುಷಿ ಕೊಟ್ಟಿವೆ' ಎಂದಿದ್ದಾರೆ.
ಅಷ್ಟಕ್ಕೂ ಸೀರಿಯಲ್ನಲ್ಲಿ ಸ್ನೇಹಾಳ ಪಾತ್ರ ಅಪಘಾತ ಮಾಡಿಸಿ ಸಾಯಿಸುವ ಮೂಲಕ ಮುಗಿಸಲಾಗಿತ್ತು. ಪುಟ್ಟಕ್ಕ ಒಂಟಿಯಾದ ತನ್ನ ಮಕ್ಕಳನ್ನು ಹೇಗೆ ಬೆಳೆಸಿದಳು, ಆ ಪೈಕಿ ಸ್ನೇಹಾ ಹೇಗೆ ಎಲ್ಲ ಸಮಸ್ಯೆಗಳನ್ನೂ ಹಿಮ್ಮೆಟ್ಟಿ ಜಿಲ್ಲಾಧಿಕಾರಿಯಾದಳು ಎಂದು ತೋರಿಸಿ ಇಂಥ ಹೆಣ್ಣುಮಕ್ಕಳಿಗೆ ಮಾದರಿಯಾಗುವ ಹೊತ್ತಿನಲ್ಲಿಯೇ, ಕೊನೆಯಲ್ಲಿ ಸ್ವಲ್ಪ ತರಾತುರಿ ಮಾಡಿ ಏಕಾಏಕಿ ಸ್ನೇಹಾಳನ್ನು ಸಾಯಿಸಿದ್ದು ಏಕೆ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. . ಇಡೀ ಸೀರಿಯಲ್ನ ಉದ್ದೇಶವನ್ನೇ ನಿರ್ದೇಶಕರು ಬುಡಮೇಲು ಮಾಡಿದರು ಎನ್ನುವ ಮಾತೂ ಸಾಕಷ್ಟು ಕೇಳಿ ಬಂದಿತ್ತು. ಆದರೆ, ಸಂಜನಾ ಅಭಿಮಾನಿಗಳ ಎದುರು ಬಂದು, ಅನಿವಾರ್ಯವಾಗಿ ನಾನು ಸೀರಿಯಲ್ ಸೆಟ್ನಿಂದ ಹೊರಕ್ಕೆ ಹೋಗಬೇಕಾಯಿತು. ಇದು ನನ್ನ ವೈಯಕ್ತಿಕ ಕಾರಣ ಎನ್ನುವ ಮೂಲಕ ಉದ್ದೇಶಪೂರ್ವಕವಾಗಿ ಸ್ನೇಹಾಳನ್ನು ಸಾಯಿಸುವ ಸೀನ್ ಮಾಡಬೇಕಾಯಿತು, ಕಥೆಯನ್ನು ಬದಲಿಸಬೇಕಾಯಿತು ಎಂದೆಲ್ಲಾ ಹೇಳುವ ಮೂಲಕ ಸಮಾಧಾನ ಪಡಿಸಿದ್ದರು.
ಇನ್ನು ಸಂಜನಾ ಬುರ್ಲಿ ಕುರಿತು ಹೇಳುವುದಾದರೆ, ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಬೆಂಗಳೂರಿನ ಡಾ. ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿಧ್ಯಾಭ್ಯಾಸ ಮುಗಿಸಿರುವ ಇವರು `ವಿಕೇಂಡ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮುಂದಿನ ವಿದ್ಯಾಭ್ಯಾಸಕ್ಕೆ, ಉನ್ನತ ಶಿಕ್ಷಣ ಪಡೆಯುವ ಹಿನ್ನೆಲೆಯಲ್ಲಿ ಧಾರಾವಾಹಿಯಿಂದ ದೂರ ಆಗ್ತಿರೋದಾಗಿ ಇದಾಗಲೇ ನಟಿ ಹೇಳಿದ್ದಾರೆ. ಸೀರಿಯಲ್ ನಿಂದ ಹೊರ ಬಂದ ಮೇಲೆ ನಟಿ ದೇಶ ವಿದೇಶ ಸುತ್ತೋದ್ರಲ್ಲೇ ಬ್ಯುಸಿಯಾಗಿದ್ರು. ಕೆಲವು ದಿನಗಳ ಹಿಂದೆ ದುಬೈನಲ್ಲಿ ಎಂಜಾಯ್ ಮಾಡ್ತಿದ್ರು, ಕೊನೆಗೆ ಹಿಮಾಲಯ ಪರ್ವತ ಟ್ರೆಕ್ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದರು.