ನಿರ್ಮಾಪಕರೊಬ್ಬರು ಮೊದಲೇ ನಟಿ ಶ್ರೀದೇವಿ ಫ್ಯಾನ್ ಆಗಿದ್ದ ಆರ್ಜಿವಿಗೆ, 'ನೀವ್ಯಾಕೆ ಶ್ರೀದೇವಿ ಹೀರೋಯಿನ್ ಮಾಡಿಕೊಂಡು ಒಂದು ಸಿನಿಮಾ ಮಾಡಬಾರ್ದು?" ಎಂದರಂತೆ. ಅಷ್ಟು ಹೇಳಿದ್ದೇ ತಡ, ಆರ್ಜಿವಿ ಅವರು 'ಕ್ಷಣ ಕ್ಷಣಂ' ಹೆಸರಿನ ಕಥೆ ಸಿದ್ಧಪಡಿಸಿ ಶ್ರೀದೇವಿ ಕಾಲ್ ಶೀಟ್..
ಹೌದು, ನಟಿ ಶ್ರೀದೇವಿ (Sridevi) ಬಗ್ಗೆ ಅದೆಷ್ಟು ಹೇಳಿದರೂ ಹೇಳೋದಕ್ಕೆ ಮತ್ತಷ್ಟು ಇನ್ನಷ್ಟು ಇದ್ದೇ ಇರುತ್ತೆ ಎಂಬಂತಾಗಿದೆ. 5ನೇ ವಯಸ್ಸಿಗೇ ಕ್ಯಾಮೆರಾ ಎದುರು ನಿಂತು ಜಗತ್ತಿನೆದುರು ಕಾಣಿಸಿಕೊಳ್ಳತೊಡಗಿದ ನಟಿ ಶ್ರೀದೇವಿ, ಸಾಯುವವರೆಗೂ ನಟಿಸುತ್ತಲೇ ಇದ್ದರು. 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶ್ರೀದೇವಿ ದಕ್ಷಿಣ ಭಾರತದಿಂದ ಬಾಲಿವುಡ್ಗೆ ಕಾಲಿಟ್ಟು ಅಲ್ಲಿ ಸೂಪರ್ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡವರು. ಭಾರತದ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುತ್ತಿದ್ದ ನಟಿ ಶ್ರೀದೇವಿ, ಸ್ಟಾರ್ ನಾಯಕರ ಸಾಲಿನಲ್ಲಿ ನಿಂತಿದ್ದವರು.
ಅಂಥ ನಟಿ ಶ್ರೀದೇವಿ ಸೌಂದರ್ಯದ ಬಗ್ಗೆಯಂತೂ ಯಾರಿಗೂ ಹೇಳಬೇಕಾಗಿಯೇ ಇಲ್ಲ. 'ಅತಿಲೋಕ ಸುಂದರಿ ಎಂದೇ ಖ್ಯಾತಿ ಪಡೆದಿದ್ದ ಶ್ರೀದೇವಿ ಯೌವನದಲ್ಲಿ ಬಹಳಷ್ಟು ಜನರ ನಿದ್ದೆಗೆಡಿಸಿದವರು. ಅವರ ಜೊತೆ ನಟಿಸಲು ಹಾತೊರೆಯುತ್ತಿದ್ದ ನಟರು, ಅವರಿಗಾಗಿಯೇ ನಿರ್ದೇಶಿಸುತ್ತಿದ್ದ ನಿರ್ದೇಶಕರು ಹಾಗೂ ಅವರಿಗಾಗಿಯೇ ಕಾದು ಸಿನಿಮಾ ನೋಡುತ್ತಿದ್ದ ಪ್ರೇಕ್ಷಕರು ಭಾರೀ ಸಂಖ್ಯೆಯಲ್ಲಿ ಇದ್ದರು ಎಂಬ ಸಂಗತಿ ಗುಟ್ಟಾಗಿಯೇನೂ ಇಲ್ಲ. ಅಂಥ ಶ್ರೀದೇವಿಗೆ ಫ್ಯಾನ್ ಆಗಿದ್ದವರು ತೆಲುಗಿನ ಸೂಪರ್ ಹಿಟ್ 'ಶಿವ' ಚಿತ್ರದ ನಿರ್ದೇಶಕ (Ram Gopal Varma) ರಾಮ್ ಗೋಪಾಲ್ ವರ್ಮಾ (ಆರ್ಜಿವಿ).
ತೆಲುಗಿನಲ್ಲಿ ನಟ ನಾಗಾರ್ಜುನ ಅಕ್ಕಿನೇನಿ ಅವರನ್ನು ಹೀರೋ ಆಗಿಸಿಕೊಂಡು 'ಶಿವ' ಚಿತ್ರವನ್ನು ತೆರೆಗೆ ತಂದರು ಆರ್ಜಿವಿ. ಈ ಚಿತ್ರ ಸೂಪರ್ ಹಿಟ್ ಆಗಿ ಅವರ ಖ್ಯಾತಿ ತೆಲುಗು ಟಾಲಿವುಡ್ ದಾಟಿ ಬಾಲಿವುಡ್ಗೂ ಹೋಯ್ತು. ಅದೇ ವೇಳೆ ನಿರ್ಮಾಪಕರೊಬ್ಬರು ಮೊದಲೇ ನಟಿ ಶ್ರೀದೇವಿ ಫ್ಯಾನ್ ಆಗಿದ್ದ ಆರ್ಜಿವಿಗೆ, 'ನೀವ್ಯಾಕೆ ಶ್ರೀದೇವಿ ಹೀರೋಯಿನ್ ಮಾಡಿಕೊಂಡು ಒಂದು ಸಿನಿಮಾ ಮಾಡಬಾರ್ದು?" ಎಂದರಂತೆ. ಅಷ್ಟು ಹೇಳಿದ್ದೇ ತಡ, ಆರ್ಜಿವಿ ಅವರು 'ಕ್ಷಣ ಕ್ಷಣಂ' ಹೆಸರಿನ ಕಥೆ ಸಿದ್ಧಪಡಿಸಿ ಶ್ರೀದೇವಿ ಕಾಲ್ ಶೀಟ್ ಪಡೆದೇಬಿಟ್ಟರು. ಆ ಚಿತ್ರಕ್ಕೆ ಹೀರೋ ಆಗಿದ್ದು ವೆಂಕಟೇಶ್.
ಅದೊಂದು ದಿನ 'ಕ್ಷಣ ಕ್ಷಣಂ' ಹಾಡಿನ ಶೂಟಿಂಗ್ ನಡೆಯುತ್ತಿತ್ತು. ಡಾನ್ಸ್ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿರಲು, ನೃತ್ಯ ನಿರ್ದೇಶಕರು 'ಕಟ್' ಎಂದು ಹೇಳುತ್ತ ಎರಡು ಮೂರು ಬಾರಿ ಟೇಕ್ ತೆಗೆದುಕೊಂಡರು. ಶೂಟಿಂಗ್ ನೋಡುತ್ತಿದ್ದ ಆರ್ಜಿವಿ ಅವರು ಕೋಪದಿಂದ 'ಡಾನ್ಸ್ ಸ್ಟೆಪ್ ಸರಿಯಾಗಿಯೇ ಇದ್ಯಲ್ಲ, ಮತ್ಯಾಕೆ ಹಾಗೆ ಕಟ್ ಹೇಳ್ತಾ ಇದೀರ?' ಎಂದು ಗದರಿದರು. ತಕ್ಷಣ ಡಾನ್ಸ್ ಮಾಸ್ಟರ್ ಸಮಾಧಾನದಿಂದ 'ಸರ್ ನೀವು ಕೇವಲ ಶ್ರೀದೇವಿಯವರನ್ನು ಮಾತ್ರ ನೋಡುತ್ತಿದ್ದೀರಾ.. ಆದ್ರೆ, ಹೀರೋ ವೆಂಕಟೇಶ್ ಅವರ ಸ್ಟೆಪ್ ರಾಂಗ್ ಆಗಿದೆ' ಎಂದ್ರಂತೆ. ತಕ್ಷಣ ತಮ್ಮ ತಪ್ಪಿನ ಅರಿವಾದಿ ಆರ್ಜಿವಿ ಸೈಲೆಂಟ್ ಆದ್ರಂತೆ.
ಅಷ್ಟರಮಟ್ಟಿಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ನಟಿ ಶ್ರೀದೇವಿಯವರ ಫ್ಯಾನ್ ಆಗಿದ್ದರು. ಶ್ರೀದೇವಿ ಶೂಟಿಂಗ್ ಸೆಟ್ನಲ್ಲಿ ಇದ್ದಾಗ ಆರ್ಜಿವಿ ಅವರು ಬೇರೆ ಯಾರನ್ನೂ, ಯಾವುದನ್ನೂ ಗಮನಿಸುತ್ತಲೇ ಇರಲಿಲ್ಲವಂತೆ. ಆದರೆ, ಅದೇ ಸರಿ ಎಂಬಂತೆ, ನಟಿ ಶ್ರೀದೇವಿಯ ನಟನೆಯಲ್ಲಿ ಮೂಡಿಬಂದ ಆರ್ಜಿವಿ ನಿರ್ದೇಶನದ ಎಲ್ಲಾ ಸಿನಿಮಾಗಳೂ ಸೂಪರ್ ಹಿಟ್ ಆಗಿವೆ. ಅದು 'ಕ್ಷಣ ಕ್ಷಣಂ' ಹಾಗೂ ನಾಗಾರ್ಜುನ ನಟನೆಯ 'ಗೋವಿಂದಾ ಗೋವಿಂದಾ' ಕೂಡ ಹೌದು. ಈಗಲೂ ಕೂಡ ಆರ್ಜಿವಿ ಅವರು ತಾವು ನಟಿ ಶ್ರೀದೇವಿಯವರ ಅಪ್ಪಟ ಫ್ಯಾನ್ ಎಂಬ ಸಂಗತಿಯನ್ನು ಹೇಳುತ್ತಲೇ ಇರುತ್ತಾರೆ.
ಇಂದು ನಟಿ ಶ್ರೀದೇವಿ ಅವರು ನಮ್ಮೊಂದಿಗೆ ಇಲ್ಲ. ಅದರೆ, ಅವರ ನಟನೆಯ ಸಿನಿಮಾಗಳ ಮೂಲಕ ಹಾಗೂ ಜನರ ಅಭಿಮಾನದ ಮೂಲಕ ಎಂದೆಂದಿಗೂ ಅವರು ನಮ್ಮೊಂದಿಗೆ ಇರುತ್ತಾರೆ. 1991 ರಲ್ಲಿ ತೆರೆಗೆ ಬಂದಿತ್ತು ಕ್ಷಣ ಕ್ಷಣಂ ಸಿನಿಮಾ.