ಹಸುಗೂಸುಗಳ ಲಾಲನೆ ಪಾಲನೆಯಲ್ಲಿ ಹಲವು ನಂಬಿಕೆಗಳಿವೆ. ಮಗುವಿನ ಹಾಸಿಗೆ ಕೆಳಗೆ ಚಾಕು, ಈರುಳ್ಳಿ ಇಡುವುದು, ಕನ್ನಡಿ ತೋರಿಸಬಾರದು, ಮಗು ಹುಟ್ಟುವ ಮುನ್ನ ಬಟ್ಟೆ ಕೊಳ್ಳಬಾರದು, ಜೇನುತುಪ್ಪ ನೆಕ್ಕಿಸುವುದು, ಕತ್ತಿಗೆ ದಾರ ಕಟ್ಟುವುದು ಇತ್ಯಾದಿ. ಇವುಗಳಲ್ಲಿ ಸರಿಯೆಷ್ಟು, ತಪ್ಪೆಷ್ಟು?
ಹಸುಗೂಸುಗಳ ಲಾಲನೆ ಪಾಲನೆ ಬಗ್ಗೆ ನಮ್ಮ ದೇಶದಲ್ಲಿ ಹಲವು ಆಚರಣೆಗಳ ನಂಬಿಕೆಗಳು ಇವೆ. ಅವುಗಳಲ್ಲಿ ಹಲವು ಮೂಢನಂಬಿಕೆಗಳೂ ಇವೆ. ಕೆಲವೊಂದು ಆಚರಣೆಗಳನ್ನು ಮಗು ಹಾಗೂ ಬಾಣಂತಿಯ ಸುರಕ್ಷತೆಗಾಗಿಯೂ ನಮ್ಮ ಪೂರ್ವಜರು ಮಾಡಿಕೊಂಡು ಬಂದಿರಬಹುದು. ಹಾಗೆ ಪುಟ್ಟ ಮಕ್ಕಳ ಕುರಿತಾದ ಕೆಲವೊಂದು ಮೂಢನಂಬಿಕೆಗಳು ಇಲ್ಲಿದೆ.
ಮಗುವಿನ ಹಾಸಿಗೆಯ ಕೆಳಗೆ ಚಾಕು ಇರಿಸುವುದು
ಮಗುವಿನ ಹಾಸಿಗೆಯ ಕೆಳಗೆ ಚಾಕುವನ್ನು ಇರಿಸುವುದರಿಂದ ಕೆಟ್ಟ ಕನಸುಗಳು ಬೀಳುವುದಿಲ್ಲ ಹಾಗೂ ಮಗುವಿಗೆ ಆರಾಮವಾಗಿ ಮಲಗಲು ಸಹಾಯ ಮಾಡುತ್ತದೆಂದು ಹೇಳಲಾಗುತ್ತದೆ. ಕೆಲವೆಡೆಗಳಲ್ಲಿ ಚಾಕುವಿನೊಂದಿಗೆ ಈರುಳ್ಳಿಯನ್ನೂ ಇಡುತ್ತಾರೆ. ಆದರೆ ಹೀಗೆ ಹಾಸಿಗೆಯ ಕೆಳಗೆ ಚಾಕುವನ್ನಿಡುವುದು ಅಪಾಯಕಾರಿ. ಇದರಿಂದಾಗಿ ಮಗುವಿಗೆ ಗಾಯವಾಗುವ ಸಂಭವ ಹೆಚ್ಚು.
ಮಗುವಿಗೆ ಕನ್ನಡಿ ತೋರಿಸಬಾರದು
ಮಗುವಿಗೆ ಕನ್ನಡಿ ತೋರಿಸಬಾರದು ಎನ್ನುವಂತಹ ಮುಢನಂಬಿಕೆಯು ಹಲವಾರು ದೇಶಗಳಲ್ಲಿದೆ. ಕನ್ನಡಿಯಲ್ಲಿ ಮಗು ತನ್ನ ಮುಖವನ್ನು ನೋಡಿದರೆ ಬುದ್ಧಿಶಕ್ತಿ ಕಡಿಮೆಯಾಗುವುದು ಎಂದು ಕೆಲವರು ನಂಬುತ್ತಾರೆ. ಕೆಲವರು ದುಷ್ಟಶಕ್ತಿಗಳು ಮಗುವಿನ ಆತ್ಮವನ್ನು ಕಸಿದುಕೊಳ್ಳುತ್ತದೆ ಎಂದು ಹೇಳುತ್ತಾರೆ. ಆದರೆ ಇದನ್ನು ಸಮರ್ಥಿಸುವ ಯಾವುದೇ ತರ್ಕಗಳಿಲ್ಲ. ಶಿಶುಗಳಿಗಾಗಿ ವಿನ್ಯಾಸಗೊಳಿಸಲಾದ ಹೆಚ್ಚಿನ ಕಲಿಕಾ ಉಪಕರಣಗಳು ಕನ್ನಡಿಗಳನ್ನು ಹೊಂದಿದೆ. ಇದು ಮಕ್ಕಳ ಮಿದುಳಿನ ಬೆಳವಣಿಗೆಗೆ ಸಹಾಯಕವಾಗಿದೆ.
ಮಗು ಹುಟ್ಟುವ ಮೊದಲು ಬಟ್ಟೆ ಕೊಂಡುಕೊಳ್ಳಬಾರದು
ಹುಟ್ಟಲಿರುವ ಮಗುವಿಗಾಗಿ ವಸ್ತುಗಳನ್ನು ಖರೀದಿಸಿದರೆ ದುರಾದೃಷ್ಟ ವಕ್ಕರಿಸುವುದು ಎನ್ನಲಾಗುತ್ತದೆ. ಇದರ ಹಿಂದಿರುವ ನಿಜವಾದ ಕಾರಣವೆಂದರೆ ಹಿಂದಿನ ಕಾಲದಲ್ಲಿ ನವಜಾತ ಶಿಶುಗಳ ಮರಣ ಹೆಚ್ಚಾಗಿತ್ತು. ಸೂಕ್ತ ವೈದ್ಯಕೀಯ ಸೌಲಭ್ಯಗಳೂ ಮಗುವಿನ ಆರೈಕೆಗಾಗಿ ಸಿಗುತ್ತಿರಲಿಲ್ಲ. ಅಂತಹ ಸನ್ನಿವೇಶದಲ್ಲಿ ಇಂತಹ ನಂಬಿಕೆಯು ಅರ್ಥಪೂರ್ಣವಾದದ್ದೇ. ಆದರೆ ಈಗಿನ ಕಾಲಕ್ಕೆ ಅಲ್ಲ. ಈ ನಂಬಿಕೆಯ ಪ್ರಕಾರ ಮಗುವಿನ ಪೋಷಕರನ್ನು ಹೊರತುಪಡಿಸಿ ಬೇರೆಯವರು ಮಗುವಿಗಾಗಿ ವಸ್ತುಗಳನ್ನು ಖರೀದಿಸಬಹುದು. ಆದರೆ ಮಗು ಜನಿಸಿದ ನಂತರವೇ ಅವುಗಳನ್ನು ನೋಡಬೇಕು. ನವಜಾತ ಶಿಶುವಿನ ಜನನದ ಸಂದರ್ಭದಲ್ಲಿ ಎಲ್ಲರೂ ಸುತ್ತೂ ಓಡಾಡುವುದು ಮಗುವಿಗೆ ಸಮಸ್ಯೆಯನ್ನುಂಟು ಮಾಡುವುದರಿಂದ ಬಾಣಂತಿ ಕೊಠಡಿಗೆ ಯಾರೂ ಪ್ರವೇಶಿಸಬಾರದು ಎನ್ನುವ ಆಚರಣೆಯನ್ನು ಅನುಸರಿಸಿಕೊಂಡು ಬಂದಿದ್ದಾರೆ.
ನವಜಾತ ಶಿಶುವಿಗೆ ಜೇನುತುಪ್ಪ ನೆಕ್ಕಿಸುವುದು
ಈ ಆಚರಣೆಯು ನಿಧಾನವಾಗಿ ಕಡಿಮೆಯಾಗುತ್ತಾ ಬಂದರೂ ಕೆಲವೊಂದು ಸಂಪ್ರದಾಯಸ್ಥ ಕುಟುಂಬಗಳು ಇಂದಿಗೂ ಈ ಆಚರಣೆಯನ್ನು ಪಾಲಿಸುತ್ತಾ ಬಂದಿದೆ. ಮಗುವಿನ ಸ್ತನಪಾನಕ್ಕೂ ಮುನ್ನವೇ ಮನೆಯ ಹಿರಿಯರು ಮಗುವಿಗೆ ಜೇನುತುಪ್ಪವನ್ನು ನೀಡುತ್ತಾರೆ. ಜೇನುತುಪ್ಪ ಸಿಹಿ ಮಾಧುರ್ಯವನ್ನು ಹೊಂದಿರಬಹುದು ಆದರೆ ಒಂದು ವರ್ಷದೊಳಗಿನ ಮಕ್ಕಳಿಗೆ ನೀಡಬಾರದು. ನವಜಾತ ಶಿಶುವಿನ ರೋಗ ಪ್ರತಿರೋಧಕ ವ್ಯವಸ್ಥೆ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಜೇನುತುಪ್ಪದಲ್ಲಿರುವ ಕ್ಲೊಸ್ಟ್ರೀಡಿಯಂ ಬೊಟ್ಯುಲಿನಂ ಎಂಬ ಬ್ಯಾಕ್ಟೀರಿಯಾವು ಇನ್ನೂ ಪಕ್ವವಾಗದ ಮಗುವಿನ ದೇಹದಲ್ಲಿ ಸೇರಿಕೊಂಡು ಬೊಟ್ಯುಲಿನಂ ಎಂಬ ಮಾರಣಾಂತಿಕ ಖಾಯಿಲೆಗೆ ಕಾರಣವಾಗಬಹುದು.
ಮಗುವಿನ ಕತ್ತಿಗೆ ಕಟ್ಟುವ ದಾರ
ಈ ಒಂದು ಆಚರಣೆಯನ್ನು ಎಲ್ಲಾ ಧರ್ಮದವರೂ ಪಾಲಿಸುತ್ತಾರೆ. ಈ ಒಂದು ಸಂಪ್ರದಾಯವನ್ನು ಸುಶಿಕ್ಷಿತ ಕುಟುಂಬದಲ್ಲೂ ನಾವು ಕಾಣಬಹುದು. ಆದರೆ ಮಗುವಿನ ಕುತ್ತಿಗೆಗೆ ಕಟ್ಟುವಂತಹ ದಾರವು ಮಗುವಿನ ಕತ್ತಿಗೆ ಬಿಗಿಯಾಗುವ ಸಾಧ್ಯತೆಗಳಿದೆ. ಹಾಗಾಗಿಯೇ ಮಗುವಿಗೆ ದಾರ, ತಂತಿಗಳಿಲ್ಲದ ಬಟ್ಟೆಯನ್ನು ಶಿಫಾರಸ್ಸು ಮಾಡಲಾಗುತ್ತದೆ. ಇನ್ನೊಂದು ವಿಚಾರವೆಂದರೆ ಸಾಮಾನ್ಯವಾಗಿ ಮಗು ಮಲಗುವ ಜಾಗ, ತೆವಳಿಕೊಂಡು ಹೋಗುವ ಜಾಗದಲ್ಲಿರುವಂತಹ ಕೊಳೆ, ಧೂಳು ಈ ದಾರಕ್ಕೆ ಅಂಟಿಕೊಂಡು ಚರ್ಮದ ಸೋಂಕುಗಳಿಗೆ ಕಾರಣವಾಗಬಹುದು. ಅಥವಾ ಆ ದಾರವನ್ನು ಮಗು ಬಾಯಿಗೆ ಹಾಕಿಕೊಂಡರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಉಂಟಾಗಬಹುದು.
ಕೆಟ್ಟ ದೃಷ್ಟಿ ನಿವಾರಣೆಗೆ ಕಣ್ಣಿಗೆ ಕಾಡಿಗೆ
ಕೆಟ್ಟ ದೃಷ್ಟಿಯಾಗುವುದು ಎನ್ನುವ ಮಾತು ಮೂಢನಂಬಿಕೆಗಳಲ್ಲಿ ಸೇರಿಕೊಂಡಿದೆ. ಇದು ಮುಖ್ಯವಾಗಿ ಮಕ್ಕಳ ವಿಷಯಕ್ಕೆ ಬಂದಾಗ ಈ ನಂಬಿಕೆಯನ್ನು ಪಾಲಿಸುವುದು ಹೆಚ್ಚು. ಆದರೆ ಮಕ್ಕಳಿಗೆ ದೃಷ್ಟಿಯಾಗುವುದು ಎಂದು ಹಚ್ಚುವ ಕಾಡಿಗೆಯು ಮಗುವಿಗೆ ಅಪಾಯಕಾರಿಯಾಗಬಹುದು. ಇತ್ತೀಚೆಗೆ ಹೆಚ್ಚಿನ ಕಾಜಲ್, ಕಾಡಿಗೆಗಳಲ್ಲಿ ಲೆಡ್ ಅಂಶವು ಹೆಚ್ಚಾಗಿರುತ್ತದೆ. ಇದು ಮಗುವಿನ ಕಣ್ಣಿಗೆ ಹಾನಿ ಮಾಡುವ ಸಂಭವ ಹೆಚ್ಚು. ಇದು ಮಗುವಿನ ದೃಷ್ಟಿಯ ಮೇಲೂ ಪರಿಣಾಮ ಬೀರಬಹುದು.
ಸೂರ್ಯಾಸ್ತದ ನಂತರ ಮಗುವಿನ ಉಗುರು ಕತ್ತರಿಸಬಾರದು
ಸಾಮಾನ್ಯವಾಗಿ ಮಗುವಿನ ಉಗುರು ಕತ್ತರಿಸುವುದು ದೊಡ್ಡ ಸಾಹಸ. ಹಿಂದಿನ ಕಾಲದಲ್ಲಿ ವಿದ್ಯುತ್ ವ್ಯವಸ್ಥೆ ಇದ್ದಿರಲಿಲ್ಲ. ಕತ್ತಲಿನಲ್ಲಿ ಮಗುವುವಿನ ಉಗುರು ಕತ್ತರಿಸುವುದು ಅಸಾಧ್ಯವಾಗಿತ್ತು. ಮಗುವಿಗೂ ಗಾಯವಾಗುವ ಸಂಭವವಿತ್ತು ಹಾಗಾಗಿ ಸೂರ್ಯಾಸ್ತದ ನಂತರ ಮಗುವಿನ ಉಗುರು ಕತ್ತರಿಸಬಾರದೆಂಬ ಆಚರಣೆಯನ್ನು ಪಾಲಿಸಿಕೊಂಡು ಬಂದರು. ಇದನ್ನೇ ಇಂದಿಗೂ ಮುಂದುವರಿಸಿಕೊಂಡು ಬರಲಾಗುತ್ತಿದೆ.
ಮಗುವಿನ ಅಂದವನ್ನು ಹೊಗಳಬಾರದು
ಯಾರೇ ಆಗಲಿ ಮಗುವಿನ ಅಂದವನ್ನು ಹೊಗಳಬಾರದು, ದೃಷ್ಟಿ ತಾಕುತ್ತದೆ ಎನ್ನುವ ನಂಬಿಕೆ ಹಲವರಲ್ಲಿದೆ. ಮಗು ತುಂಬಾ ಮುದ್ದಾಗಿದೆ ಎಂದರೆ ಮಗು ಮಂಕಾಗುತ್ತದೆ ಅಥವಾ ಮಗುವಿನ ತೂಕ ಕಡಿಮೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಇದು ಭಾರತದಲ್ಲಿ ಮಾತ್ರವಲ್ಲದೇ ಕೆಲವು ದೇಶಗಳಲ್ಲೂ ಇಂಥಾದ್ದೊಂದು ಮೂಢನಂಬಿಕೆ ಇದೆ. ಕೆಲವರು ಮಗುವನ್ನು ಹೊಗಳಿದರೂ ಅದರ ಕೆಟ್ಟ ಪರಿಣಾಮವನ್ನು ನಿವಾರಿಸಲು ಬದಿಗೆ ಉಗುಳುವುದು ಅಥವಾ ಮರದ ವಸ್ತುಗಳನ್ನು ಸ್ಪರ್ಶಿಸುತ್ತಾರೆ.
ಕನಸಿನಲ್ಲಿ ಅನಕೊಂಡ ಹಾವು ಕಂಡರೆ ಏನರ್ಥ?
ರಾತ್ರಿ ಮಕ್ಕಳ ಬಟ್ಟೆಯನ್ನು ಒಣಹಾಕಬಾರದು
ಮಕ್ಕಳ ಬಟ್ಟೆಗಳನ್ನು ಆರಲು ಹಾಕಿದ್ದರೆ ಸೂರ್ಯಾಸ್ತದ ನಂತರ ತೆಗೆಯಬೇಕು ಎನ್ನುವ ನಂಬಿಕೆ ಇದೆ. ಯಾಕೆಂದರೆ ಮಗುವಿನ ಬಟ್ಟೆಯಲ್ಲಿ ರಾತ್ರಿ ಸಂಚರಿಸುವಂತಹ ಕೀಟಗಳು ಸೇರಿಕೊಳ್ಳಬಹುದು. ಇದು ಮಗುವಿಗೆ ಬಟ್ಟೆ ಹಾಕುವಾಗ ಕಚ್ಚುವ ಸಂದರ್ಭವಿರುತ್ತದೆ. ಮತ್ತೊಂದು ಕಾರಣವೆಂದರೆ ರಾತ್ರಿ ಬೀಳುವ ಇಬ್ಬನಿಯು ಮಗುವಿನ ಬಟ್ಟೆಯನ್ನು ತೇವಗೊಳಿಸಬಹುದು ಹಾಗೂ ನಾರುವಂತೆ ಮಾಡಬಹುದು. ಕೆಲವೊಂದು ಪ್ರಾಣಿಗಳು ಮಗುವಿನ ಬಟ್ಟೆಯನ್ನು ನೆಕ್ಕಬಹುದು, ಅಥವಾ ತಮ್ಮ ಲಾಲಾರಸವನ್ನು ಬಟ್ಟೆಯ ಮೇಲೆ ಬಿಡಬಹುದು. ಆದ್ದರಿಂದ ಮಗುವಿನ ಬಟ್ಟೆಗಳನ್ನು ಆರಲು ಹಾಕಿದ್ದರೆ ಸಂಜೆಯ ಮೊದಲು ತೆಗೆಯಬೇಕು.