ಮೆಸ್ಸಿ ಕೇರಳ ಭೇಟಿ ರದ್ದಾಗಿದ್ದು, ಪ್ರಾಯೋಜಕರು ಒಪ್ಪಂದ ಉಲ್ಲಂಘಿಸಿ ಹಣ ಪಾವತಿಸದ ಕಾರಣ ಅರ್ಜೆಂಟೀನಾ ಫುಟ್ಬಾಲ್ ಅಸೋಸಿಯೇಷನ್ ಮತ್ತು ಕೇರಳ ಸರ್ಕಾರ ಕಾನೂನು ಕ್ರಮ ಜರುಗಿಸಲಿದೆ. ರಿಪೋರ್ಟರ್ ಬ್ರಾಡ್ಕಾಸ್ಟಿಂಗ್ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಕ್ಟೋಬರ್ನಲ್ಲಿ ಚೀನಾದಲ್ಲಿ ಅರ್ಜೆಂಟೀನಾ ಎರಡು ಪಂದ್ಯಗಳನ್ನಾಡಲಿದೆ. ಕೇರಳದ ಫುಟ್ಬಾಲ್ ಅಭಿಮಾನಿಗಳಿಗೆ ನಿರಾಸೆ.
ತಿರುವನಂತಪುರ: ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ರದ್ದಾ(Messi Kerala Visit Cancelled)ದ ಹಿನ್ನೆಲೆಯಲ್ಲಿ ಅರ್ಜೆಂಟೀನಾ ಫುಟ್ಬಾಲ್ ಅಸೋಸಿಯೇಷನ್ ಮತ್ತು ಕೇರಳ ಸರ್ಕಾರ ಕಾನೂನು ಕ್ರಮಕ್ಕೆ ಮುಂದಾಗಿದೆ. ಸ್ಪಾನ್ಸರ್ಗಳಾದ ರಿಪೋರ್ಟರ್ ಬ್ರಾಡ್ಕಾಸ್ಟಿಂಗ್ ಕಂಪನಿ ವಿರುದ್ಧ ಒಪ್ಪಂದ ಉಲ್ಲಂಘನೆ ಆರೋಪದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ.
ಕೇರಳದಲ್ಲಿ ಎರಡು ಪಂದ್ಯಗಳನ್ನು ಆಯೋಜಿಸಲು ಅರ್ಜೆಂಟೀನಾ ಫುಟ್ಬಾಲ್ ಅಸೋಸಿಯೇಷನ್(Argentina Football Association) ಜೊತೆ ರಿಪೋರ್ಟರ್ ಬ್ರಾಡ್ಕಾಸ್ಟಿಂಗ್ ಕಂಪನಿ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದ ಪ್ರಕಾರ 45 ದಿನಗಳ ಒಳಗೆ ಅರ್ಧ ಹಣ ಪಾವತಿಸಬೇಕಿತ್ತು. ಆದರೆ ಕಂಪನಿ ಹಣ ಪಾವತಿಸಲಿಲ್ಲ. ಸ್ಪಾನ್ಸರ್ಗಳ ವಿರುದ್ಧ ಸರ್ಕಾರ ಕೂಡ ಕಾನೂನು ಕ್ರಮ ಜರುಗಿಸುವ ಸಾಧ್ಯತೆ ಇದೆ. ಭೇಟಿ ರದ್ದತಿ ಬಗ್ಗೆ ಅರ್ಜೆಂಟೀನಾ ಸರ್ಕಾರಕ್ಕೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಮಾಹಿತಿ ಬಂದ ನಂತರ ಸರ್ಕಾರ ಕಾನೂನು ಕ್ರಮದ ಬಗ್ಗೆ ಚಿಂತಿಸಲಿದೆ.
ಅಕ್ಟೋಬರ್ನಲ್ಲಿ ಲಿಯೋನೆಲ್ ಮೆಸ್ಸಿ(Lionel Messi) ಕೇರಳಕ್ಕೆ ಬರುತ್ತಾರೆ ಎಂದು ಕ್ರೀಡಾ ಸಚಿವರು ಹೇಳಿದ್ದರು. ಆದರೆ ಕೆಲವು ವಾರಗಳಿಂದ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. 2011ರಲ್ಲಿ ಅರ್ಜೆಂಟೀನಾ ಫುಟ್ಬಾಲ್ ತಂಡವು ಕೊನೆಯ ಬಾರಿಗೆ ಭಾರತಕ್ಕೆ ಬಂದಿತ್ತು. ಆಗ ಲಿಯೋನೆಲ್ ಮೆಸ್ಸಿ ನೇತೃತ್ವದ ತಂಡ ಕೋಲ್ಕತ್ತದಲ್ಲಿ ವೆನೆಜುವೆಲಾ ವಿರುದ್ಧ ಆಡಿತ್ತು. 2022ರಲ್ಲಿ ಫಿಫಾ ವಿಶ್ವಕಪ್(FIFA World Cup 2022) ಗೆದ್ದ ಅರ್ಜೆಂಟೀನಾ ತಂಡಕ್ಕೆ ಕೇರಳದಿಂದ ಸಿಕ್ಕ ಬೆಂಬಲಕ್ಕೆ ಅರ್ಜೆಂಟೀನಾ ಫುಟ್ಬಾಲ್ ಅಸೋಸಿಯೇಷನ್ ಧನ್ಯವಾದ ತಿಳಿಸಿತ್ತು.
ನಂತರ ಕೇರಳ ಸರ್ಕಾರ(Kerala Government) ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ ಆಹ್ವಾನಿಸಿತ್ತು. ಅರ್ಜೆಂಟೀನಾ ಕೂಡ ಆಡಲು ಒಪ್ಪಿಗೆ ಸೂಚಿಸಿತ್ತು. ಆದರೆ ತಂಡವನ್ನು ಕರೆತರುವ ವೆಚ್ಚ ಸರ್ಕಾರಕ್ಕೆ ದೊಡ್ಡ ಹೊರೆಯಾಗಿತ್ತು. ಕೊನೆಗೆ HSBC ಪ್ರಾಯೋಜಕತ್ವ ವಹಿಸಿಕೊಂಡಿದೆ ಎಂದು ಸಚಿವರು ಹೇಳಿದ್ದರು.
ಕೆಲ ದಿನಗಳ ಹಿಂದಷ್ಟೇ ಲಿಯೋನೆಲ್ ಮೆಸ್ಸಿ ಕೇರಳಕ್ಕೆ ಆಗಮಿಸುವುದನ್ನು ಖಚಿತಪಡಿಸಿಕೊಂಡಿದ್ದ ಸಚಿವರು, ‘ಅರ್ಜೆಂಟೀನಾ ತಂಡ 2 ಸ್ನೇಹಾರ್ಥ ಪಂದ್ಯ ಆಡಲಿದೆ. ಸ್ಥಳ ಮತ್ತು ಎದುರಾಳಿ ತಂಡದ ಬಗ್ಗೆ ಶೀಘ್ರದಲ್ಲೇ ನಿರ್ಧರಿಸುತ್ತೇವೆ. 50 ಸಾವಿರ ಆಸನ ಸಾಮರ್ಥ್ಯವಿರುವ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜಿಸುತ್ತೇವೆ’ ಎಂದಿದ್ದರು. ‘ಮೆಸ್ಸಿ ಅ.25ರಂದು ಕೇರಳಕ್ಕೆ ಆಗಮಿಸಲಿದ್ದಾರೆ. ಸ್ನೇಹಾರ್ಥ ಫುಟ್ಬಾಲ್ ಪಂದ್ಯ ಮಾತ್ರವಲ್ಲದೆ ಕೆಲ ಖಾಸಗಿ ಕಾರ್ಯಕ್ರಮಗಳಲ್ಲೂ ಭಾಗಿಯಾಗಲಿದ್ದಾರೆ. ಅವರು 7 ದಿನಗಳ ಕಾಲ ಕೇರಳದಲ್ಲೇ ವಾಸ್ತವ್ಯ ಹೂಡಲಿದ್ದಾರೆ’ ಎಂದು ಮಾಹಿತಿ ನೀಡಿದ್ದರು.
ಆದರೆ ನಿನ್ನೆ ತಂಡದ ಈ ವರ್ಷದ ಸೌಹಾರ್ದ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಿದೆ. ಈ ವರ್ಷ ಅರ್ಜೆಂಟೀನಾ ಭಾರತಕ್ಕೆ ಬರುವುದಿಲ್ಲ ಎಂದು ಖಚಿತವಾಗಿದೆ. ಅಕ್ಟೋಬರ್ನಲ್ಲಿ ಚೀನಾದಲ್ಲಿ ಎರಡು ಪಂದ್ಯಗಳನ್ನು ಆಡಲಿದೆ. ನವೆಂಬರ್ನಲ್ಲಿ ಆಫ್ರಿಕಾ ಮತ್ತು ಕತಾರ್ನಲ್ಲಿ ಪಂದ್ಯಗಳಿವೆ. ಈ ವರ್ಷ ಸೆಪ್ಟೆಂಬರ್ ವೇಳೆಗೆ ದಕ್ಷಿಣ ಅಮೆರಿಕ ವಿಶ್ವಕಪ್ ಅರ್ಹತಾ ಪಂದ್ಯಗಳು ಮುಗಿಯಲಿವೆ. ನಂತರ ವಿಶ್ವಕಪ್ ತಯಾರಿಗಾಗಿ ಸೌಹಾರ್ದ ಪಂದ್ಯಗಳನ್ನು ಆಡಲಿದೆ.
ಕೇರಳದ ಮಲಪ್ಪುರಂ ಹಾಗು ಕೋಝಿಕ್ಕೋಡ್ನಲ್ಲಿ ಅರ್ಜೆಂಟೀನಾ ಹಾಗೂ ಲಿಯೋನೆಲ್ ಮೆಸ್ಸಿ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಹೀಗಾಗಿ ಕೇರಳ ಕ್ರೀಡಾಸಚಿವರಾದ ಅಬ್ದುರ್ರಹಿಮಾನ್, ಅರ್ಜೆಂಟೀನಾವನ್ನು ಕೇರಳಕ್ಕೆ ಕರೆ ತರುವುದಾಗಿ ಈ ಹಿಂದೆಯೇ ಘೋಷಿಸಿದ್ದರು. ಹೀಗಾಗಿ ಕೇರಳದ ಫುಟ್ಬಾಲ್ ಪ್ರಿಯರು ತಮ್ಮ ನೆಲದಲ್ಲಿ ಅರ್ಜೆಂಟೀನಾ ಹಾಗೂ ಮೆಸ್ಸಿಯ ಕಾಲ್ಚಳಕವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದರು. ಆದರೆ ಕೇರಳ ಫುಟ್ಬಾಲ್ ಫ್ಯಾನ್ಸ್ಗೆ ನಿರಾಸೆ ಎದುರಾಗಿದೆ.