ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ರೋಡಲ್ಲಿದ್ದ ಕಾರು ಜಖಂ!
ಕೇದಾರನಾಥ ಯಾತ್ರೆಗೆ ತೆರಳುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದಾಗಿ ತುರ್ತು ಭೂಸ್ಪರ್ಶ ಮಾಡಿದೆ. ಯಾತ್ರಿಕರು ಸುರಕ್ಷಿತರಾಗಿದ್ದು, ಪೈಲಟ್ನ ಸಮಯಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದೆ. ಡಿಜಿಸಿಎ ಘಟನೆಯ ತನಿಖೆ ಆರಂಭಿಸಿದೆ.
- FB
- TW
- Linkdin
Follow Us
)
ಕೇದಾರನಾಥ ಧಾಮಕ್ಕೆ ತೆರಳುತ್ತಿದ್ದ ಖಾಸಗಿ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಉಂಟಾಗಿ, ರುದ್ರಪ್ರಯಾಗ ಜಿಲ್ಲೆಯ ಗುಪ್ತಕಾಶಿ ಬಳಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಶನಿವಾರ ನಡೆದಿದೆ. ರಸ್ತೆ ಮೇಲೆಯೇ ಲ್ಯಾಂಡಿಂಗ್ ಆದ ಪರಿಣಾಮ ಅಲ್ಲಿಂದ ಕಾರೊಂದು ಜಖಂ ಆಗಿದೆ. ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಸುರಕ್ಷಿತವಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ. ಪೈಲಟ್ನ ತ್ವರಿತ ನಿರ್ಧಾರ ಮತ್ತು ಚಾಣಾಕ್ಷತೆ ಈ ಅಪಾಯದ ಸಂದರ್ಭದಲ್ಲಿಯೂ ಜೀವಗಳನ್ನು ರಕ್ಷಿಸಿತು.
ಉತ್ತರಾಖಂಡದ ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಮಹಾನಿರ್ದೇಶಕ ಡಾ. ವಿ. ಮುರುಗೇಶನ್ ಮಾಹಿತಿ ನೀಡಿದ್ದು, ಈ ಘಟನೆ ರುದ್ರಪ್ರಯಾಗದ ಗುಪ್ತಕಾಶಿ ಪ್ರದೇಶದಲ್ಲಿ ಸಂಭವಿಸಿದೆ ಪೈಲಟ್ ಹಾರಾಟದ ವೇಳೆಯೇ ತಾಂತ್ರಿಕ ದೋಷವನ್ನು ಗಮನಿಸಿ ತಕ್ಷಣ ರಸ್ತೆಯಲ್ಲಿ ಲ್ಯಾಂಡಿಂಗ್ ಮಾಡಲು ನಿರ್ಧರಿಸಿದರು. ಆ ಸಮಯದಲ್ಲಿ ಹೆಲಿಕಾಪ್ಟರ್ನಲ್ಲಿ ಇದ್ದ ಎಲ್ಲರೂ ಸುರಕ್ಷಿತವಾಗಿ ಸ್ಥಳಾಂತರಗೊಂಡರು. ಕಾರಿಗೆ ಹಾನಿಯಾಗಿದರೂ, ಕಾರಿನಲ್ಲಿ ಯಾರೂ ಇರದ ಕಾರಣ ಮತ್ತೊಂದು ಅಪಾಯ ತಪ್ಪಿದೆ.
ಈ ಕ್ರೆಸ್ಟೆಲ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ಗೆ ಸೇರಿದ್ದ ಹೆಲಿಕಾಪ್ಟರ್ ರುದ್ರಪ್ರಯಾಗ ಜಿಲ್ಲೆಯ ಶಿರಸಿಯಿಂದ ಕೇದಾರನಾಥದತ್ತ ಯಾತ್ರಿಕರೊಂದಿಗೆ ಹೊರಟಿತ್ತು. ಹಾರಾಟದ ಸಮಯದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಪೈಲಟ್ ಅವರು ತಕ್ಷಣವೇ ಹೆಲಿಪ್ಯಾಡ್ ತಲುಪುವ ಪ್ರಯತ್ನವನ್ನು ಬಿಟ್ಟು, ಹತ್ತಿರದ ರಸ್ತೆಯಲ್ಲಿ ಸುರಕ್ಷಿತ ತುರ್ತು ಲ್ಯಾಂಡಿಂಗ್ ಮಾಡಲು ನಿರ್ಧರಿಸಿದರು. ಈ ಮುಂಜಾಗ್ರತಾ ಕ್ರಮದಿಂದ ಯಾವುದೇ ಅಪಾಯ ಸಂಭವಿಸದೆ ಎಲ್ಲರೂ ಸುರಕ್ಷಿತವಾಗಿ ಹೊರಬಂದರು. ಯಾವುದೇ ಗಾಯ ಅಥವಾ ಸಾವಿನ ಪ್ರಕರಣಗಳು ವರದಿಯಾಗಿಲ್ಲ. ಎಲ್ಲಾ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗಿದೆ ಮತ್ತು ಪರಿಸ್ಥಿತಿಯನ್ನು ವೃತ್ತಿಪರ ರೀತಿಯಲ್ಲಿ ನಿಭಾಯಿಸಲಾಗಿದೆ,” ಎಂದು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ (UCADA) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
ಈ ಅಪಘಾತದ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಗೆ ತಕ್ಷಣ ಮಾಹಿತಿ ನೀಡಲಾಗಿದ್ದು, ಸಂಬಂಧಿತ ನಿಯಮಿತ ಪ್ರಕ್ರಿಯೆಗಳು ಪ್ರಾರಂಭವಾಗಿವೆ. ತಾಂತ್ರಿಕ ದೋಷದ ನಿಖರ ಕಾರಣವನ್ನು ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಇತ್ತ, ಕೇದಾರನಾಥ ಶಟಲ್ ಸೇವೆಗಳು ಎಂದಿನಂತೆ ನಡೆಯುತ್ತಿದ್ದು, ಇತರ ಹೆಲಿಕಾಪ್ಟರ್ ಸೇವೆಗಳ ಮೇಲೆ ಈ ಘಟನೆಯು ಯಾವುದೇ ಪರಿಣಾಮ ಬೀರಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಡಿಜಿಸಿಎ ಅಧಿಕೃತ ಮಾಹಿತಿ
ಉತ್ತರಾಖಂಡದಲ್ಲಿ ಸಂಭವಿಸಿದ ಈ ತುರ್ತು ಲ್ಯಾಂಡಿಂಗ್ ಬಗ್ಗೆ ಡಿಜಿಸಿಎ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಕ್ರೆಸ್ಟೆಲ್ ಏವಿಯೇಷನ್ನ ಎಡಬ್ಲ್ಯು119 ಮಾದರಿಯ VT-RNK ನೋಂದಣಿಯ ಹೆಲಿಕಾಪ್ಟರ್ ಶನಿವಾರ ಬೆಳಿಗ್ಗೆ ಬಡಾಸು (ಶಿರಸಿ) ಹೆಲಿಪ್ಯಾಡ್ನಿಂದ ಮಧ್ಯಾಹ್ನ 12:52 ಕ್ಕೆ ಹೊರಟಿತು. ಕೆಲವೇ ನಿಮಿಷಗಳಲ್ಲಿ, ಪೈಲಟ್ ಕ್ಯಾಪ್ಟನ್ ಆರ್.ಪಿ.ಎಸ್. ಸೋಧಿ ಅವರು "ಕಲೆಕ್ಟಿವ್ ಕಂಟ್ರೋಲ್" ಎಂಬ ಪ್ರಮುಖ ನಿಯಂತ್ರಣ ಘಟಕದಲ್ಲಿ ತಾಂತ್ರಿಕ ದೋಷವಿದೆ ಎಂಬ ಶಂಕೆಯನ್ನು ವರದಿ ಮಾಡಿದರು.
ಆ ದೋಷದ ಕಾರಣ, ಪೈಲಟ್ ಸಮೀಪದ ಭರಸು ಹೆಲಿಪ್ಯಾಡ್ ಬಳಿಯ ರಸ್ತೆ ಪ್ರದೇಶದಲ್ಲಿ ನಿಯಂತ್ರಿತವಾಗಿ ತುರ್ತು ಲ್ಯಾಂಡಿಂಗ್ ಮಾಡಿದರು. ಪ್ರಯಾಣಿಕರೆಲ್ಲರೂ ಸಂಪೂರ್ಣ ಸುರಕ್ಷಿತರಾಗಿದ್ದು, ಯಾವುದೇ ಶಾರೀರಿಕ ಗಾಯಗಳಾಗಿಲ್ಲ. ಆದರೆ, ಪೈಲಟ್ಗೆ ಲ್ಯಾಂಡಿಂಗ್ ಬಳಿಕ ಬೆನ್ನು ನೋವು ಕಾಣಿಸಿಕೊಂಡು ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆಯ ಬಗ್ಗೆ ತಿಳಿದುಕೊಳ್ಳಲು ಡಿಜಿಸಿಎಯ ಉತ್ತರ ವಲಯದ ವಾಯು ಸುರಕ್ಷತಾ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಅವರು ಘಟನೆಯ ಸ್ಥಳದಲ್ಲಿಯೇ ಪರಿಶೀಲನೆ ನಡೆಸುತ್ತಿದ್ದಾರೆ.
ಇದು ಇತ್ತೀಚೆಗೆ ಉತ್ತರಾಖಂಡದಲ್ಲಿ ಸಂಭವಿಸುತ್ತಿರುವ ಹೆಲಿಕಾಪ್ಟರ್ ಅಪಘಾತಗಳ ಸರಣಿಯಲ್ಲಿ ಇನ್ನೊಂದು ಘಟನೆಯಾಗಿದೆ. ಈ ಹಿಂದಿನ ಘಟನೆಗಳಲ್ಲಿ, ಮೇ 8ರಂದು ಉತ್ತರಕಾಶಿ ಜಿಲ್ಲೆಯಲ್ಲಿ ಭಾಗೀರಥಿ ನದಿಯ ಸಮೀಪ ಖಾಸಗಿ ಹೆಲಿಕಾಪ್ಟರ್ ಪತನಗೊಂಡು ಆರು ಜನರು ಸಾವಿಗೀಡಾಗಿದ್ದರು. ಆ ಅಪಘಾತವು ರಾಜ್ಯದ ವಿಮಾನಯಾನ ಭದ್ರತೆಯ ಕುರಿತಾಗಿ ಹಲವಾರು ಪ್ರಶ್ನೆಗಳನ್ನು ಎಬ್ಬಿಸಿತ್ತು. ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮಾಹಿತಿ ಪ್ರಕಾರ, ಆ ಸಂದರ್ಭದಲ್ಲಿ ಹೆಲಿಕಾಪ್ಟರ್ ಸುಮಾರು 200 ರಿಂದ 250 ಮೀಟರ್ ಆಳದ ಕಂದಕಕ್ಕೆ ಬಿದ್ದಿತ್ತು. ಪ್ರಯಾಣಿಕರಲ್ಲಿ ಮುಂಬೈ ಮತ್ತು ಆಂಧ್ರಪ್ರದೇಶದವರು ಸೇರಿದ್ದರು. ಆ ವಿಮಾನವನ್ನು ಕ್ಯಾಪ್ಟನ್ ರಾಬಿನ್ ಸಿಂಗ್ ಚಲಾಯಿಸುತ್ತಿದ್ದರು.