ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತವು ಕನಿಷ್ಠ ಆರು ಪಾಕಿಸ್ತಾನಿ ಯುದ್ಧ ವಿಮಾನಗಳು ಮತ್ತು ಒಂದು ಮಿಲಿಟರಿ ಸಾರಿಗೆ ವಿಮಾನವನ್ನು ಹೊಡೆದುರುಳಿಸಿದೆ ಎಂದು ವರದಿಯಾಗಿದೆ. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದಲ್ಲಿರುವ ಎರಡು ಪ್ರಸಿದ್ಧ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಲಾಗಿತ್ತು.

ನವದೆಹಲಿ (ಜೂ.7): ಉನ್ನತ ರಕ್ಷಣಾ ಮೂಲಗಳ ಪ್ರಕಾರ, ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತವು ಕನಿಷ್ಠ ಆರು ಪಾಕಿಸ್ತಾನಿ ಯುದ್ಧ ವಿಮಾನಗಳು ಮತ್ತು ಒಂದು ಮಿಲಿಟರಿ ಸಾರಿಗೆ ವಿಮಾನವನ್ನು ಹೊಡೆದುರುಳಿಸಿದೆ ಎಂದು ವರದಿಯಾಗಿದೆ. ಇದು ಗಡಿಯಾಚೆಗಿನ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಲು ಮತ್ತು ತಕ್ಷಣದ ಕದನ ವಿರಾಮವನ್ನು ಜಾರಿಗೊಳಿಸಲು ಶ್ವೇತಭವನದ ಒತ್ತಡಕ್ಕೆ ಭಾರತ ಮಣಿಯಿತು ಎಂಬ ಪ್ರತಿಪಕ್ಷಗಳ ಆರೋಪಗಳನ್ನು ಮತ್ತಷ್ಟು ತಳ್ಳಿಹಾಕಿದೆ.

ನ್ಯೂಸ್18 ವರದಿಯಲ್ಲಿ ಉಲ್ಲೇಖಿಸಲಾದ ಮೂಲಗಳ ಪ್ರಕಾರ, ಪಹಲ್ಗಾಮ್ನಲ್ಲಿ ದಾಳಿಯಾದ ಮರುದಿನ ಅಂದರೆ ಏಪ್ರಿಲ್ 23 ರಂದು ನಡೆದ ಉನ್ನತ ಮಟ್ಟದ ಮಾತುಕತೆಯ ಸಮಯದಲ್ಲಿ, ಪಾಕಿಸ್ತಾನದಲ್ಲಿರುವ ಎರಡು ಪ್ರಸಿದ್ಧ ಭಯೋತ್ಪಾದಕರ ನೆಲೆಗಳಾದ ಬಹಾವಲ್ಪುರ್ ಮತ್ತು ಮುರಿಡ್ಕೆಗಳನ್ನು ಪ್ರಮುಖ ಗುರಿಗಳನ್ನಾಗಿ ಸ್ವತಃ ಸೇನೆಯೇ ಆಯ್ಕೆ ಮಾಡಿತ್ತು. ಈ ವೇಳೆ ಮೋದಿ ಸೌದಿ ಪ್ರವಾಸದಲ್ಲಿದ್ದರು. ಮೋದಿ ಅನುಮತಿಗೂ ಕಾಯದೆ ಈ ಎರಡು ಟಾರ್ಗೆಟ್‌ಅನ್ನು ಫಿಕ್ಸ್‌ ಮಾಡಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಮೂರೂ ಸೇನಾ ಮುಖ್ಯಸ್ಥರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಹಿಸಿದ್ದರು.

ಸೌದಿ ಅರೇಬಿಯಾದಿಂದ ಮುಂಜಾನೆ ಹಿಂದಿರುಗಿದ ಪ್ರಧಾನಿ ನರೇಂದ್ರ ಮೋದಿ, ಕಾರ್ಯಾಚರಣೆಯ ಯೋಜನೆಗಳನ್ನು ಅಂತಿಮಗೊಳಿಸಲು ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಅಧ್ಯಕ್ಷತೆ ವಹಿಸಿದ್ದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಂತಾರಾಷ್ಟ್ರೀಯ ಒತ್ತಡಕ್ಕೆ ಪ್ರಧಾನಿ ಮಣಿದಿದ್ದಾರೆ ಎಂದು ಕಾಂಗ್ರೆಸ್ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೊಂಡರೂ, ಅಂತಹ ಯಾವುದೇ ಸಂವಹನ ನಡೆದಿಲ್ಲ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

"ಪ್ರಧಾನಿ ಮೋದಿ ಟ್ರಂಪ್ ಜೊತೆ ಮಾತನಾಡಲಿಲ್ಲ. ಜೆಡಿ ವ್ಯಾನ್ಸ್ ಸಂಪರ್ಕಿಸಿದಾಗಲೂ ಪ್ರಧಾನಿ ತಮ್ಮ ನಿರ್ಧಾರದಲ್ಲಿ ಅತ್ಯಂತ ದೃಢವಾಗಿ ನಿಂತಿದ್ದರು ಮತ್ತು ಯಾವುದೇ ಒತ್ತಡಕ್ಕೂ ಬಗ್ಗಲಿಲ್ಲ" ಎಂದು ಹಿರಿಯ ಮೂಲವನ್ನು ಉಲ್ಲೇಖಿಸಲಾಗಿದೆ.

ಪೈಲಟ್‌ಗಳನ್ನು ರಕ್ಷಿಸಲು ಮತ್ತು ಉಲ್ಬಣವನ್ನು ತಡೆಗಟ್ಟುವ ಸಲುವಾಗಿ, ಮೇ 7 ರ ಮುಂಜಾನೆ 1:05 ರಿಂದ 1:30 ರ ನಡುವೆ ನಡೆಸಲಾದ ದಾಳಿಯು ಕೇವಲ 22 ನಿಮಿಷಗಳ ಕಾಲ ನಡೆಯಿತು ಮತ್ತು ಅಂತರರಾಷ್ಟ್ರೀಯ ಗಡಿ ಅಥವಾ ನಿಯಂತ್ರಣ ರೇಖೆಯನ್ನು (LoC) ದಾಟದೆ ನಡೆಸಲಾಯಿತು. ವರದಿಯಲ್ಲಿ ಉಲ್ಲೇಖಿಸಲಾದ ಆಂತರಿಕ ಮಾಹಿತಿಯ ಪ್ರಕಾರ, ವಿಶೇಷ ಉಪಕರಣಗಳು ನಾಶವಾಗುತ್ತಿರುವ ಗುರಿಗಳನ್ನು ರಿಯಲ್‌ಟೈಮ್‌ನಲ್ಲಿ ನೈಟ್‌ ವಿಷನ್‌ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿತ್ತು.

ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) 10 ಕ್ಕೂ ಹೆಚ್ಚು ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದವು. "ಯುದ್ಧತಂತ್ರದ ತಪ್ಪುಗಳಿಂದಾಗಿ" ಕಾರ್ಯಾಚರಣೆಯ ಆರಂಭದಲ್ಲಿ ಕೆಲವು ವಿಮಾನಗಳನ್ನು ಕಳೆದುಕೊಂಡಿದ್ದೇವೆ ಎಂದು ಭಾರತ ಒಪ್ಪಿಕೊಂಡಿದ್ದರೂ, ಎಲ್ಲಾ ಭಾರತೀಯ ಪೈಲಟ್‌ಗಳು ಸುರಕ್ಷಿತವಾಗಿ ಮರಳಿದ್ದಾರೆ ಎಂದು ಮೂಲಗಳು ಒತ್ತಿ ಹೇಳಿದವು. ಈ ನಡುವೆ, ಕಾರ್ಯಾಚರಣೆಯ ಆರಂಭದಲ್ಲಿ ಆದ ನಷ್ಟಗಳು ತನಿಖೆಯಲ್ಲಿವೆ.

ಮೂಲಗಳ ಪ್ರಕಾರ, ಭಾರತದ ದಾಳಿಯಲ್ಲಿ ಎಫ್-16, ಜೆಎಫ್-17, ಸಿ-130ಜೆ ಮಿಲಿಟರಿ ಸಾರಿಗೆ ವಿಮಾನ ಮತ್ತು ಎಸ್‌ಎಎಬಿ-2000 ಎಡಬ್ಲ್ಯೂಎಸಿಎಸ್ ಸೇರಿದಂತೆ ಆರು ಕ್ಕೂ ಹೆಚ್ಚು ಪಾಕಿಸ್ತಾನಿ ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ವರದಿಯಲ್ಲಿ ಉಲ್ಲೇಖಿಸಲಾದ ಎರಡನೇ ಮೂಲದ ಪ್ರಕಾರ, ಕರಾಚಿ ಬಂದರಿನ ಮೇಲೆ ದಾಳಿ ಮಾಡುವ ಸಂಭಾವ್ಯ ನೌಕಾ ದಾಳಿಯ ಬಗ್ಗೆ ಪಾಕಿಸ್ತಾನ ಕಳವಳ ವ್ಯಕ್ತಪಡಿಸಿದ್ದರಿಂದ ಅದು ಉದ್ವಿಗ್ನತೆಯನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿತು ಮತ್ತು ಮುಕ್ತ ಸಂಘರ್ಷವನ್ನು ತಪ್ಪಿಸಿತು. ಭಾರತ ಸಂಪೂರ್ಣವಾಗಿ ಸಿದ್ಧವಾಗಿದ್ದರೂ ಮತ್ತು ಹೆಚ್ಚಿನ ಎಚ್ಚರಿಕೆಯನ್ನು ಹೊಂದಿದ್ದರೂ ಸಹ, ಭಾರತೀಯ ನೌಕಾಪಡೆ ನೇರ ಸಂಪರ್ಕದಿಂದ ದೂರವಿತ್ತು ಎಂದಿದ್ದಾರೆ.