ಚೀನಾ-ಪಾಕ್‌ ವಾಯು ರಕ್ಷಣಾ ವ್ಯವಸ್ಥೆಯು ಭಾರತದ ಬ್ರಹ್ಮೋಸ್‌ ಕ್ಷಿಪಣಿಗೆ ಸರಿಸಾಟಿಯೇ ಅಲ್ಲ. ಆಪರೇಷನ್ ಸಿಂದೂರ ಕಾರ್ಯಾಚರಣೆಯು ಭಾರತದ ಉನ್ನತ ಮಿಲಿಟರಿ ತಾಂತ್ರಿಕತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅಮೆರಿಕದ ಮಿಟಿಟರಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ (ಮೇ.17): ಚೀನಾ-ಪಾಕ್‌ ವಾಯು ರಕ್ಷಣಾ ವ್ಯವಸ್ಥೆಯು ಭಾರತದ ಬ್ರಹ್ಮೋಸ್‌ ಕ್ಷಿಪಣಿಗೆ ಸರಿಸಾಟಿಯೇ ಅಲ್ಲ. ಆಪರೇಷನ್ ಸಿಂದೂರ ಕಾರ್ಯಾಚರಣೆಯು ಭಾರತದ ಉನ್ನತ ಮಿಲಿಟರಿ ತಾಂತ್ರಿಕತೆಗೆ
ಹಿಡಿದ ಕೈಗನ್ನಡಿಯಾಗಿದೆ ಎಂದು ಅಮೆರಿಕದ ಮಿಟಿಟರಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆಪರೇಷನ್ ಸಿಂದೂರದ ಮೂಲಕ ಭಾರತವು ಆಕ್ರಮಣಶೀಲತೆ ಮತ್ತು ರಕ್ಷಣಾ ಕ್ಷಮತೆ ಎರಡರ ವಿಚಾರದಲ್ಲೂ ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿದೆ. ಜತೆಗೆ, ಪಾಕಿಸ್ತಾನದ ಯಾವುದೇ ಭಾಗದ ಮೇಲೆ, ಯಾವುದೇ ಸಮಯದಲ್ಲಿ ದಾಳಿ ನಡೆಸುವುದು ಕಷ್ಟವೇನಲ್ಲ ಎಂಬ ಸಂದೇಶವನ್ನು ರವಾನಿಸಿದೆ ಎಂದು ಯುದ್ಧ ತಜ್ಞ, ಅಮೆರಿಕದ ನಿವೃತ್ತ ಕರ್ನಲ್‌ ಜಾನ್‌ ಸ್ಪೆನ್ಸರ್‌ ತಿಳಿಸಿದ್ದಾರೆ.

ಪಾಕಿಸ್ತಾನದುದ್ದಕ್ಕೂ ದಾಳಿ ಮಾಡುವಲ್ಲಿ ಭಾರತವು ಯಶಸ್ವಿಯಾಗಿದೆ, ಅದರ ಜತೆಗೆ ಪಾಕಿಸ್ತಾನದ ಕ್ಷಿಪಣಿ ಮತ್ತು ಡ್ರೋನ್‌ಗಳ ಪ್ರತಿದಾಳಿಯನ್ನೂ ಸುಲಭವಾಗಿ ತಡೆದಿದೆ. ಪಾಕಿಸ್ತಾನವು ಬಳಸುತ್ತಿರುವ ಚೀನಾ ಏರ್‌ಡಿಫೆನ್ಸ್‌ ವ್ಯವಸ್ಥೆಯನ್ನು ಭೇದಿಸುವಲ್ಲಿ ಬ್ರಹ್ಮೋಸ್‌ ಕ್ಷಿಪಣಿಯು ಯಶಸ್ವಿಯಾಗಿದ್ದು, ಇದು ಭಾರತದ ಉನ್ನತ ಮಿಲಿಟರಿ ತಾಂತ್ರಿಕತೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಆಪರೇಷನ್‌ ಸಿಂದೂರ ಬೆನ್ನಲ್ಲೇ ರಕ್ಷಣಾ ಇಲಾಖೆಗೆ ಹೆಚ್ಚುವರಿ ₹50,000 ಕೋಟಿ! ರಕ್ಷಣಾ ಇಲಾಖೆ ವಾರ್ಷಿಕ ಬಜೆಟ್ ಎಷ್ಟು?

ಏತನ್ಮಧ್ಯೆ, ಸಿಂದೂ ನದಿ ಒಪ್ಪಂದವನ್ನು ರದ್ದು ಮಾಡಿದ ಭಾರತದ ಕ್ರಮವನ್ನೂ ಬೆಂಬಲಿಸಿದ ಸ್ಪೆನ್ಸರ್‌ ಅ‍ವರು, ಒಂದು ವೇಳೆ ಪಾಕಿಸ್ತಾನವು ಇದೇ ರೀತಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದನ್ನು ಮುಂದುವರಿಸಿದರೆ ಅದರಿಂದಾಗುವ ಪರಿಣಾಮದ ಕುರಿತೂ ಮರು ಆಲೋಚಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದಿಂದ ಒಂದಾದ ಮೇಲೊಂದರಂತೆ ಬ್ರಹ್ಮೋಸ್‌ ದಾಳಿ: ಪಾಕ್‌ ನಿವೃತ್ತ ಮಾರ್ಷಲ್‌

ನವದೆಹಲಿ: ಭಾರತ ನಡೆಸಿದ ದಾಳಿಯಿಂದ ನಮಗೆ ಹೆಚ್ಚಿನ ಹಾನಿಯಾಗಿಲ್ಲ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ಬಣ್ಣ ಇದೀಗ ಒಂದೊಂದಾಗಿ ಬಯಲಾಗುತ್ತಿದೆ. ಆಪರೇಷನ್‌ ಸಿಂದೂರದಡಿಯಲ್ಲಿ ನಡೆಸಲಾದ ನಿಖರ ದಾಳಿಯಲ್ಲಿ ನಮ್ಮ ಕಣ್ಗಾವಲು ವಿಮಾನಕ್ಕೆ ಹಾನಿಯಾಗಿದೆ ಎಂದು ಪಾಕಿಸ್ತಾನದ ನಿವೃತ್ತ ಮಾರ್ಷಲ್‌ ಮಸೂದ್‌ ಅಖ್ತರ್‌ ಒಪ್ಪಿಕೊಂಡಿದ್ದಾರೆ. 

ಇದನ್ನೂ ಓದಿ: 17 ದೇಶಗಳು ಖರೀದಿಸಲು ಆಸಕ್ತಿ ತೋರಿದ ಭಾರತದ ಬ್ರಹ್ಮೋಸ್ ಕ್ಷಿಪಣಿ ಬೆಲೆ ಎಷ್ಟು?

ಟೀವಿ ಸಂದರ್ಶವೊಂದರಲ್ಲಿ ಮಾತನಾಡಿದ ಅವರು, ‘ಭಾರತೀಯ ವಾಯುಪಡೆ ಒಂದರಮೇಲೊಂದರಂತೆ, ನೆಲದಿಂದ ನೆಲಕ್ಕೆ ಮತ್ತು ಗಾಳಿಯಿಂದ ನೆಲಕ್ಕೆ ಹಾರುವ 4 ಕ್ಷಿಪಣಿಗಳನ್ನು ಹಾರಿಸಿತು. ಅದು ಬ್ರಹ್ಮೋಸ್‌ ಇರಬಹುದು. ಕೂಡಲೇ ನಮ್ಮ ಪೈಲೆಟ್‌ಗಳು, ಭೊಲಾರಿ ವಾಯುನೆಲೆಯಲ್ಲಿ ನಿಂತಿದ್ದ ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆಯನ್ನು ರಕ್ಷಿಸಲು ಧಾವಿಸಿದರಾದರೂ ಅದಕ್ಕೆ ಹಾನಿಯಾಗಿದೆ’ ಎಂದರು