ವರ್ಷದ ಅಭಿಯಾನದ ಬಳಿಕ ಇಂದೋರ್ ಭಾರತದ ಮೊದಲ ಭಿಕ್ಷುಕ-ಮುಕ್ತ ನಗರವಾಗಿದೆ. ಐದು ಸಾವಿರ ಭಿಕ್ಷುಕರಿಗೆ ಪುನರ್ವಸತಿ, ಮಕ್ಕಳಿಗೆ ಶಿಕ್ಷಣ ಒದಗಿಸಿ, ಭಿಕ್ಷಾಟನೆ ನಿಷೇಧಿಸಲಾಗಿದೆ. ಕೇಂದ್ರ ಸಚಿವಾಲಯ ಮತ್ತು ವಿಶ್ವಬ್ಯಾಂಕ್ ಗುರುತಿಸಿದ ಈ ಯೋಜನೆ, ದೇಶಕ್ಕೆ ಮಾದರಿಯಾಗಿದೆ. ಉಲ್ಲಂಘಿಸಿದವರಿಗೆ ದಂಡ, ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಲಾಗಿದೆ.
ಇಂದೋರ್ ದೇಶದ ಮೊದಲ ಭಿಕ್ಷುಕ ಮುಕ್ತ ನಗರವಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಇಂದೋರ್ ಸ್ಥಳೀಯ ಆಡಳಿತ ಸಂಸ್ಥೆಯು ಈ ಭಿಕ್ಷಾಟನೆ ಮುಕ್ತ ನಗರವೆಂಬ ಘೋಷಣೆ ಮಾಡುವುದಕ್ಕೂ ಮುನ್ನ ಒಂದು ವರ್ಷದ ಹಿಂದೆ ನಗರದ ಬೀದಿಗಳಲ್ಲಿ ಸುಮಾರು 5,000 ಭಿಕ್ಷುಕರು ಇದ್ದರು ಎಂದು ಹೇಳಿದರು. ಇದಾದ ನಂತರ ಒಂದು ವರ್ಷಗಳ ಕಾಲ ನಿರಂತರವಾಗಿ ಜಾಗೃತಿ ಮತ್ತು ಭಿಕ್ಷಾಟನೆ ಮುಕ್ತ ನಗರ ನಿರ್ಮಾಣಕ್ಕೆ ಅಭಿಯಾನ ಕೈಗೊಂಡು ಶ್ರಮಿಸಿದ್ದಾರೆ. ಹೊಸ ವರ್ಷದ ಆರಂಭದ ವೇಳೆ 2025ರ ಜ.1ರಿಂದ ಇಂದೋರ್ನಲ್ಲಿ ಭಿಕ್ಷಾಟನೆ ಮಾಡಿದ ಎಫ್ಐಆರ್ ದಾಖಲು ಮಾಡುವುದಾಗಿ ಸ್ಥಳೀಯ ಆಡಳಿತ ಸಂಸ್ಥೆ ಆದೇಶ ಹೊರಡಿಸಿತ್ತು. ಇದೆಲ್ಲದರ ಫಲವಾಗಿ ಇದೀಗ ಇಂದೋರ್ ನಗರವನ್ನು ಭಿಕ್ಷಾಟನೆ ಮುಕ್ತ ನಗರವನ್ನಾಗಿ ಘೋಷಣೆ ಮಾಡಲಾಗಿದೆ. ಇಲ್ಲಿದೆ ಮತ್ತಷ್ಟು ವಿವರ..
ಫೆಬ್ರವರಿ 2024 ರಲ್ಲಿ ಪ್ರಾರಂಭವಾದ ಒಂದು ವರ್ಷದ ಅಭಿಯಾನದ ನಂತರ ಇಂದೋರ್ ಅನ್ನು ಭಾರತದ ಮೊದಲ ಭಿಕ್ಷುಕ-ಮುಕ್ತ ನಗರವೆಂದು ಘೋಷಿಸಲಾಗಿದೆ. ಕೇಂದ್ರ ಸಚಿವಾಲಯ ಮತ್ತು ವಿಶ್ವಬ್ಯಾಂಕ್ ಗುರುತಿಸಿದ ಈ ಉಪಕ್ರಮವು ವಯಸ್ಕ ಭಿಕ್ಷುಕರಿಗೆ ಉದ್ಯೋಗವನ್ನು ಒದಗಿಸುವ ಮೂಲಕ ಮತ್ತು ಮಕ್ಕಳನ್ನು ಶಾಲೆಗಳಿಗೆ ದಾಖಲಿಸುವ ಮೂಲಕ ಭಿಕ್ಷುಕರ ಪುನರ್ವಸತಿ ಕೇಂದ್ರವನ್ನು ಆರಂಭಿಸಿತ್ತು. ಇದೀಗ ನಗರವು ಭಿಕ್ಷಾಟನೆ ಮತ್ತು ದಾನ ನೀಡುವುದನ್ನು ನಿಷೇಧಿಸಿದೆ. ಈ ಆದೇಶ ಉಲ್ಲಂಘನೆಗಳನ್ನು ವರದಿ ಮಾಡಿದವರಿಗೆ ಬಹುಮಾನಗಳನ್ನು ನೀಡುತ್ತಾ ಬಂದಿತ್ತು. ಇದೀಗ ಎಲ್ಲ ಕಾರ್ಯಾಚರಣೆಗಳು ಕೂಡ ಫಲಿಸಿವೆ.
ಇದೀಗ ಇಂದೋರ್ ದೇಶದ ಮೊದಲ ಭಿಕ್ಷುಕ ಮುಕ್ತ ನಗರವಾಗಿದೆ ಎಂದು ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು. ನಗರದಲ್ಲಿ ಭಿಕ್ಷುಕರಿಗೆ ಉದ್ಯೋಗ ಹುಡುಕಲು ಸಹಾಯ ಮಾಡುವ ಮೂಲಕ ಪುನರ್ವಸತಿ ಕಲ್ಪಿಸಲಾಗಿದೆ. ಮತ್ತು ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಶಾಲೆಗಳಿಗೆ ದಾಖಲಿಸಲಾಗಿದೆ ಎಂದು ಹೇಳಿದರು.
ಭಿಕ್ಷಾಟನೆ ನಿರ್ಮೂಲನೆಗಾಗಿ ನಾವು ಪ್ರಾರಂಭಿಸಿದ ಅಭಿಯಾನವು ಸ್ವತಃ ನಮ್ಮ ನಗರಕ್ಕೆ ಮಾತ್ರವಲ್ಲದೇ ಇಡೀ ದೇಶಕ್ಕೆ ಮಾದರಿಯಾಗಿದೆ. ಇದನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಮತ್ತು ವಿಶ್ವಬ್ಯಾಂಕ್ ತಂಡವು ಗುರುತಿಸಿದೆ ಎಂದು ಸಿಂಗ್ ಹೇಳಿದರು. ಭಿಕ್ಷಾಟನೆ ನಿರ್ಮೂಲನೆಗಾಗಿ ಕೇಂದ್ರ ಸಚಿವಾಲಯವು ಪೈಲಟ್ ಯೋಜನೆಯನ್ನು ಪ್ರಾರಂಭಿಸಿದ 10 ನಗರಗಳಲ್ಲಿ ಇಂದೋರ್ ಕೂಡ ಒಂದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ರಾಮನಿವಾಸ್ ಬುಧೋಲಿಯಾ, ಭಿಕ್ಷಾಟನೆ ವಿರುದ್ಧ ಅಭಿಯಾನವನ್ನು ಫೆಬ್ರವರಿ 2024 ರಲ್ಲಿ ಪ್ರಾರಂಭಿಸಲಾಯಿತು ಎಂದು ಹೇಳಿದರು. ನಗರದಲ್ಲಿ ಸುಮಾರು 5,000 ಭಿಕ್ಷುಕರಿದ್ದರು, ಅದರಲ್ಲಿ 500 ಮಕ್ಕಳು ಸೇರಿದ್ದಾರೆ ಎಂದು ಮಾಹಿತಿ ನೀಡಿದರು.
ಮೊದಲ ಹಂತದಲ್ಲಿ, ನಾವು ಜಾಗೃತಿ ಅಭಿಯಾನವನ್ನು ನಡೆಸಿದ್ದೇವೆ. ನಂತರ ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಲಾಯಿತು. ರಾಜಸ್ಥಾನದಿಂದ ಇಂದೋರ್ಗೆ ಭಿಕ್ಷೆ ಬೇಡಲು ಬರುತ್ತಿದ್ದ ಅನೇಕ ಭಿಕ್ಷುಕರನ್ನು ಸಹ ನಾವು ಕಂಡುಹಿಡಿದು ಅವರಿಗೆ ಎಚ್ಚರಿಕೆ ನೀಡಿ ಭಿಕ್ಷಾಟನೆ ಮಾಡದಂತೆ ಶಿಸ್ತು ಕ್ರಮವನ್ನೂ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಅಧಿಕಾರಿ ಬುಧೋಲಿಯಾ ಹೇಳಿದರು. ನಗರದಲ್ಲಿ ಭಿಕ್ಷಾಟನೆ ಮಾಡುವುದರ ಜೊತೆಗೆ ಭಿಕ್ಷುಕರಿಗೆ ಹಣ ನೀಡುವುದು ಅಥವಾ ಅವರಿಂದ ಏನನ್ನಾದರೂ ಖರೀದಿಸುವುದನ್ನು ನಿಷೇಧಿಸಲಾಗಿದೆ. ಇದುವರೆಗೆ ಉಲ್ಲಂಘನೆಗಾಗಿ 3 ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಭಿಕ್ಷಾಟನೆಯ ಬಗ್ಗೆ ಮಾಹಿತಿ ನೀಡುವ ಯಾರಿಗಾದರೂ 1,000 ರೂ. ಬಹುಮಾನವನ್ನು ನೀಡಲಾಗುತ್ತದೆ. ಇಲ್ಲಿಯವರೆಗೆ ಅನೇಕ ಜನರು ಬಹುಮಾನವನ್ನು ಪಡೆದಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.
ಭಾರತದಲ್ಲಿ ಭಿಕ್ಷಾಟನೆ ಮುಕ್ತ ನಗರ ನಿರ್ಮಾಣ ಯೋಜನೆಯ ಪೈಲಟ್ ಸಿಟಿಗಳಲ್ಲಿ ಮೈಸೂರು ಕೂಡ ಒಂದಾಗಿತ್ತು. ಆದರೆ, ಮೈಸೂರಿನಲ್ಲಿಯೂ ಕಳೆದ ವರ್ಷ ಫೆಬ್ರವರಿ ತಿಂಗಳಿಂದಲೇ ಭಿಕ್ಷಾಟನೆ ಮುಕ್ತ ನಗರವನ್ನಾಗಿ ಮಾಡಲು ಹಲವು ಅಭಿಮಾನವನ್ನೂ ಮೈಸೂರು ಸ್ಥಳೀಯ ಆಡಳಿತ ಸಂಸ್ಥೆ ಕೈಗೊಂಡಿತ್ತು. ಇದಕ್ಕಾಗಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಸ್ಮೈಲ್ ವತಿಯಿಂದ (ಸರ್ಪೋಟ್ ಫಾರ್ ಮಾರ್ಜಿನಲೈಸ್ಟ್ ಇಂಡಿವಿಜ್ಯುವಲ್ಸ್ ಫಾರ್ ಲೈವಿ ಹುಡ್ ಆ್ಯಂಡ್ ಎಂಟರ್ಪೈಸಸ್) ಯೋಜನೆಯಡಿ ಮೈಸೂರು ಮಹಾನಗರ ಪಾಲಿಕೆಗೆ 31 ಲಕ್ಷ ರೂ. ಅನುದಾನ ನೀಡಲಾಗಿತ್ತು. ಆದರೆ, ಮೈಸೂರು ನಗರ ಕರ್ನಾಟಕದ ಪ್ರಮುಖ ಪ್ರವಾಸಿ ಕೆಂದ್ರವಾಗಿರುವ ಹಿನ್ನೆಲೆಯಲ್ಲಿ ಭಿಕ್ಷಾಟನೆ ಮುಕ್ತ ಮಾಡುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ.