ಕ್ಯಾಪ್ಟನ್ ಯಶಿಕಾ ಹತ್ವಾಲ್, ಎರಡು ವರ್ಷದ ಮಗುವಿನೊಂದಿಗೆ ಮತ್ತು ಗರ್ಭಿಣಿಯಾಗಿದ್ದಾಗಲೇ ೧೯೯೯ರ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದರು. ತಂದೆಯ ಹುತಾತ್ಮತೆಯಿಂದ ಪ್ರೇರಿತರಾದ ಇವರು, ಸೇನೆಯಲ್ಲಿ ಮಹಿಳೆಯರಿಗೆ ಅವಕಾಶ ದೊರೆತಾಗ ಸೇರ್ಪಡೆಗೊಂಡರು. ಯುದ್ಧದಲ್ಲಿ ಗೆದ್ದ ಇವರು, ಭವಿಷ್ಯದ ಯುದ್ಧಗಳು ಸೀಮಿತ ಪ್ರದೇಶಗಳಿಗೆ ಸೀಮಿತವಾಗಿರುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಪರೇಷನ್ ಸಿಂದೂರದ ಬಳಿಕ, ಕಾರ್ಯಾಚರಣೆಯ ಹೊಣೆ ಹೊತ್ತಿರುವ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ಬಗ್ಗೆ ಇನ್ನಿಲ್ಲದ ಶ್ಲಾಘನೆ, ಹೆಮ್ಮೆ ವ್ಯಕ್ತವಾಗುತ್ತಿರುವ ಈ ಹೊತ್ತಿನಲ್ಲಿಯೇ, ಅವರಂತೆಯೇ ಧೀರ ಅಮ್ಮಂದಿರು ಯುದ್ಧಭೂಮಿಗಿಳಿದು ಜಯಶಾಲಿಗಳಾಗಿ ಹೊರಹೊಮ್ಮಿದವರೂ ಇದ್ದಾರೆ. ಇತಿಹಾಸದ ಪುಟ ನೋಡಿದಾಗ ವೀರನಾರಿಯರ ಚರಿತ್ರೆ ಕೇಳಿದರೇ ಮೈ ಪುಳುಕಿತಗೊಳ್ಳುತ್ತದೆ. ಅದೇ ರೀತಿ ಇಂದಿಗೂ ವನಿತೆಯರು ರಣರಂಗಕ್ಕೆ ಇಳಿದಿವರಿದ್ದಾರೆ, ಪ್ರಾಣವನ್ನು, ತಮ್ಮ ಕುಟುಂಬವನ್ನು ಲೆಕ್ಕಿಸದೇ ದೇಶಕ್ಕಾಗಿ ದುಡಿಯುತ್ತಿರುವವರೂ ಇದ್ದಾರೆ. ಆದರೆ, ಇವರ ಬಗ್ಗೆ ಜನರಿಗೆ ತಿಳಿಯುವುದೇ ಇಲ್ಲ, ಏಕೆಂದರೆ ಇವರು ಚಿತ್ರನಟಿಯರು ಅಲ್ಲವಲ್ಲ! ಇವರದ್ದೇ ಜೀವನ ಚರಿತ್ರೆಯ ಸಿನಿಮಾ ಮಾಡಿ, ಅದರಲ್ಲಿ ನಟಿಸಿದರೆ ಅವರೇ ಯುದ್ಧಭೂಮಿಗೆ ಇಳಿದವರಂತೆ ಜೈಜೈಕಾರ ಹಾಕುವ ಅಭಿಮಾನಿಗಳಿಗೇನೂ ಕಮ್ಮಿ ಇಲ್ಲ. ಆದರೆ ಇಂಥ ಯೋಧೆಯರ ಬಗ್ಗೆ ಮಾತ್ರ ತಿಳಿದಿರುವುದು ತೀರಾ ಕಡಿಮೆ ಜನರಿಗೆ ಮಾತ್ರ ಎನ್ನಬಹುದು.
ಅಂಥವರಲ್ಲಿ ಒಬ್ಬರು ಕ್ಯಾಪ್ಟನ್ ಯಶಿಕಾ ಹತ್ವಾಲ್ ತ್ಯಾಗಿ. ಇವರ 2 ವರ್ಷದ ಕಂದನನ್ನು 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಸಮಯದಲ್ಲಿ, ಸೇನಾ ಶಿಬಿರಕ್ಕೆ ಕರೆದುಕೊಂಡು ಹೋಗಿದ್ದ ಇವರು, ಆಗ ಎರಡು ತಿಂಗಳ ಗರ್ಭಿಣಿಯೂ ಆಗಿದ್ದರು! ಅವರ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ರಾಜ್ ಶಮಾನಿ ಅವರ ಯುಟ್ಯೂಬ್ ಚಾನೆಲ್ಗೆ ಇವರು ಕೊಟ್ಟಿರುವ ಸಂದರ್ಶನದಲ್ಲಿ ಅವರು ಮಾತನಾಡಿರುವುದನ್ನು ಕೇಳಿದರೆ ಮೈ ಝುಂ ಎನ್ನುತ್ತದೆ. ನನಗೆ ಆ ಸಮಯದಲ್ಲಿ 2 ವರ್ಷದ ಮಗು ಇತ್ತು. ಮತ್ತೆ ಎರಡು ತಿಂಗಳ ಗರ್ಭಿಣಿಯಾಗಿದ್ದೆ. ಆ ಸಮಯದಲ್ಲಿ ಕಾರ್ಗಿಲ್ ಯುದ್ಧಕ್ಕೆ ಹೋಗಬೇಕಿತ್ತು. ಮಗುವನ್ನು ಮನೆಯಲ್ಲಿ ಬಿಟ್ಟು ಹೋಗಲು ಆಗಲಿಲ್ಲ. ಶಿಬಿರಕ್ಕೆ ಮಗುವನ್ನು ಕರೆದುಕೊಂಡು ಬರಲೇ ಎಂದು ಸೀರಿಯರ್ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಾಗ ಅವರು ಒಪ್ಪಿಕೊಂಡರು. ಮಗುವನ್ನು ಕರೆದುಕೊಂಡು ಯುದ್ಧಭೂಮಿಯ ಶಿಬಿರಕ್ಕೆ ಹೋದೆ ಎಂದು ಆ ದಿನಗಳನ್ನು ನೆನೆಪಿಸಿಕೊಂಡಿದ್ದಾರೆ ಯಶಿಕಾ.
Operation Sindoor: ರಾಣಿ ಲಕ್ಷ್ಮಿ ಬಾಯಿ ಜತೆ ಸೋಫಿಯಾ ಖುರೇಷಿ ಸಂಬಂಧ! ರೋಚಕ ಇತಿಹಾಸ ತೆರೆದಿಟ್ಟ ಕರ್ನಲ್
ಅಲ್ಲಿರುವ ಎಲ್ಲಾ ಯೋಧರು ನನ್ನ ಎರಡು ವರ್ಷದ ಕಂದನಲ್ಲಿ ತಾವು ಮನೆಯಲ್ಲಿ ಬಿಟ್ಟು ಬಂದ ಮಗುವನ್ನು ಕಾಣುತ್ತಿದ್ದರು. ಅದು ಯುದ್ಧಭೂಮಿ. ಯಾವಾಗ ಏನು ಬೇಕಾದರೂ ಆಗಬಹುದು. ನನ್ನ ಮಗನಿಗೆ ಬೈ ಬೈ ಹೇಳುವ ಮೂಲಕ ಯುದ್ಧಭೂಮಿಗೆ ಹೋಗುತ್ತಿದ್ದರು. ಆ ಮೂಲಕ ತಮ್ಮ ಮಗುವಿಗೇ ವಿದಾಯ ಹೇಳುವ ರೀತಿಯಲ್ಲಿ ಅವರು ತೋರುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಈ ಯುದ್ಧದಲ್ಲಿ ಯಶಿಕಾ ಜಯಸಾಧಿಸಿ ಬಂದಿದ್ದಾರೆ. ಇದೇ ಸಮಯದಲ್ಲಿ ಅವರು, ಈಗ ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನದ ಸಂಘರ್ಷದ ಕುರಿತು ಮಾತನಾಡಿದ್ದಾರೆ. ಒಂದು ವೇಳೆ ಎರಡೂ ರಾಷ್ಟ್ರಗಳ ನಡುವೆ ಯುದ್ಧವಾದರೆ ಅದು ಸಾಂಪ್ರದಾಯಿಕ ಯುದ್ಧ ಆಗುವುದಿಲ್ಲ. ಅಂಥ ಯುದ್ಧಗಳೆಲ್ಲಾ ಈಗ ಮುಗಿದು ಹೋಗಿರುವ ಅಧ್ಯಾಯ. ಈಗೇನಾದರೂ ಯುದ್ಧವಾದರೆ ಅದು ಕೆಲವೇ ಕೆಲವುಪ್ರದೇಶಗಳಿಗೆ ಸೀಮಿತವಾಗಿರುತ್ತದೆ. ಕಾರ್ಗಿಲ್ ಯುದ್ಧವೂ ಅದೇ ರೀತಿ ಆಗಿತ್ತು ಎಂದಿದ್ದಾರೆ.
ಇದೇ ವೇಳೆ, ತಾವು ಕಾರ್ಗಿಲ್ ಯುದ್ಧಕ್ಕೆ ಹೋದ ಸಮಯದಲ್ಲಿ ನಡೆದ ಘಟನೆಯನ್ನು ಅವರು ಈ ಪಾಡ್ಕಾಸ್ಟ್ನಲ್ಲಿ ವಿವರಿಸಿದ್ದಾರೆ. ಇನ್ನು ಯಶಿಕಾ ಕುರಿತು ಹೇಳುವುದಾದರೆ, ಇವರು 7 ವರ್ಷದವನಿದ್ದಾಗ, ಇವರ ತಂದೆ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಒಮ್ಮೆ ಅವರು ಈ ವಿಷಯವನ್ನು ಹೇಳಿದ್ದರು. ನಾನು ದೊಡ್ಡವಳಾದಾಗ ಸೈನ್ಯದಲ್ಲಿ ಮಹಿಳೆಯರು ಇರಬಹುದು ಎನ್ನುವ ಕಲ್ಪನೆ ಇರಲಿಲ್ಲ. ಆ ಬಗ್ಗೆ ನನಗೆ ಕನಸೂ ಇರಲಿಲ್ಲ. ಆದರೆ ನನ್ನ ತಂದೆಯ ಸಮವಸ್ತ್ರ ಧರಿಸಿದ ಚಿತ್ರವನ್ನು ನೋಡಿದಾಗಲೆಲ್ಲಾ ನನಗೆ ದೇಶಪ್ರೇಮ ಉಕ್ಕುತ್ತಿತ್ತು. ಶಾಲೆಯಲ್ಲಿ, ನಾನು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ಗೆ ಸೇರಿದೆ ಮತ್ತು ಪದವಿ ಪಡೆದ ನಂತರ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ಗೆ ಸೇರಲು ಯೋಜಿಸಿದ್ದೆ. ಆಗಲೇ, 1993 ರಲ್ಲಿ, ಭಾರತೀಯ ಸೇನೆಯು ಮಹಿಳೆಯರು ಸೇರಬಹುದು ಮತ್ತು ಅಧಿಕಾರಿಗಳಾಗಬಹುದು ಎಂದು ಘೋಷಿಸಿತು. ನಾನು ತಕ್ಷಣ ಅರ್ಜಿ ಸಲ್ಲಿಸಿ 1993 ರಲ್ಲಿ ಅಧಿಕಾರಿಗಳ ತರಬೇತಿ ಅಕಾಡೆಮಿಗೆ ಸೇರಿದೆ. ಅಲ್ಲಿಂದ ತಮ್ಮ ಸೇನೆಯ ಜರ್ನಿ ಶುರುವಾಯಿತು ಎಂದಿದ್ದರು.
ಪಾಕ್ನಲ್ಲಿ 7 ವರ್ಷ ಮುಸ್ಲಿಮಾಗಿದ್ದು ಕಿವಿಯಿಂದ ಸಿಕ್ಕಿಬಿದ್ದ 'ಆಪರೇಷನ್ ಸಿಂದೂರ'ದ ಹೀರೋ ಸ್ಟೋರಿ ಇದು!