ನಗರದ ಕಾವೇರಿ ಹಾರ್ಟ್‌ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಪರೂಪದ ವೈದ್ಯಕೀಯ ಪ್ರಕರಣದಲ್ಲಿ 55 ವರ್ಷದ ಮಹಿಳೆಯೊಬ್ಬರ ಪಿತ್ತಕೋಶದಿಂದ 861 ಕಲ್ಲುಗಳನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ.ಜಿ.ಆರ್‌. ಚಂದ್ರಶೇಖರ್‌ ತಿಳಿಸಿದ್ದಾರೆ.

ಮೈಸೂರು (ಜೂ.09): ನಗರದ ಕಾವೇರಿ ಹಾರ್ಟ್‌ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಪರೂಪದ ವೈದ್ಯಕೀಯ ಪ್ರಕರಣದಲ್ಲಿ 55 ವರ್ಷದ ಮಹಿಳೆಯೊಬ್ಬರ ಪಿತ್ತಕೋಶದಿಂದ 861 ಕಲ್ಲುಗಳನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ.ಜಿ.ಆರ್‌. ಚಂದ್ರಶೇಖರ್‌ ತಿಳಿಸಿದ್ದಾರೆ. ಮಹಿಳೆ ತೀವ್ರ ಹೊಟ್ಟೆನೋವು ಮತ್ತು ಕಾಮಾಲೆಯೊಂದಿಗೆ ಆಸ್ಪತ್ರೆಗೆ ಆಗಮಿಸಿದ್ದರು.

ತಪಾಸಣೆ ಬಳಿಕ ಅವರ ಪಿತ್ತಕೋಶ ಹಾಗೂ ಪಿತ್ತರಸ ನಾಳ ಎರಡರಲ್ಲಿಯೂ ಕಲ್ಲು ಇರುವುದು ದೃಢಪಟ್ಟಿತು. ಇವರು ಡಾ. ನಿಖಿಲ್‌ಕುಮಾರ್‌ ಜೋ ಮತ್ತು ಡಾ.ಆರ್‌.ಎಂ. ಅರವಿಂದ್‌ ಅವರ ಬಳಿ ಚಿಕಿತ್ಸೆ ಮುಂದುವರೆಸಿ ಲ್ಯಾಪ್ರೋಸ್ಕೋಪಿಕ್‌ ಸರ್ಜರಿ ಪಡೆದರು. ಆರಂಭದಲ್ಲಿ ಎಂಡೋಸ್ಕೋಪಿಕ್‌ ರೆಟ್ರೋಗ್ರೇಡ್‌ ಕೊಲೆಂಜಿಯೊ ಪ್ಯಾಂಕ್ರಿಯಾಟೋಗ್ರಫಿ ವಿಧಾನದಿಂದ ಪಿತ್ತರಸ ನಾಳದ ಕಲ್ಲುಗಳನ್ನು ಯಶಸ್ವಿಯಾಗಿ ತೆಗೆಯಲಾಯಿತು. ನಂತರ ಲ್ಯಾಪ್ರೋಸ್ಕೋಪಿಕ್‌ ಶಸ್ತ್ರಚಿಕಿತ್ಸೆ ನಡೆಯಿತು.

ಈ ವೇಳೆ ತೀವ್ರ ಆಶ್ಚರ್ಯ ಮೂಡಿಸುವಂತೆ ಒಟ್ಟು 861 ಕಲ್ಲುಗಳನ್ನು ತೆಗೆಯಲಾಗಿದೆ. ಶಸ್ತ್ರಚಿಕಿತ್ಸೆ ಕಿರಿಯ ಆಕ್ರಮಣ ತಂತ್ರದಲ್ಲಿ ಸಂಪೂರ್ಣ ಯಶಸ್ವಿಯಾಗಿ ನಡೆಯಿತು. ವೈದ್ಯರ ಉತ್ತಮ ಚಿಕಿತ್ಸೆಯಿಂದ ರೋಗಿ ಕೂಡಲೇ ಗುಣಮುಖಳಾಗಿ ಮಾರನೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಆಧುನಿಕ ಇ.ಆರ್‌.ಸಿ.ಪಿ ಮತ್ತು ಲ್ಯಾಪ್ರೋಸ್ಕೋಪಿಕ್‌ ಶಸ್ತ್ರಚಿಕಿತ್ಸಾ ಸೌಲಭ್ಯವಿದ್ದು, ಸಾರ್ವಜನಿಕರು ಇದರ ಲಾಭಪಡೆಯಬೇಕು ಎಂದು ಅವರು ಕೋರಿದ್ದಾರೆ.

500ಕ್ಕೂ ಹೆಚ್ಚು ಮಂದಿಗೆ ಉಚಿತ ಕಿಡ್ನಿ ತಪಾಸಣೆ: ನಗರದ ಸಿಗ್ಮಾ ಆಸ್ಪತ್ರೆಯಲ್ಲಿ ವಿಶ್ವ ಕಿಡ್ನಿ ದಿನದ ಅಂಗವಾಗಿ ಆಯೋಜಿಸಿದ್ದ ಉಚಿತ ಕಿಡ್ನಿ ತಪಾಸಣಾ ಶಿಬಿರವನ್ನು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ರಾಜವಂಶ ಪರಂಪರೆಯವರು ಮೊದಲಿನಿಂದಲೂ ಅರೋಗ್ಯದ ದೃಷ್ಟಿಯಲ್ಲಿ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಈ ಆಸ್ಪತ್ರೆಯು ಕಿಡ್ನಿ ರೋಗ ಮುಂದಾಳತ್ವ ಇರುವುದನ್ನು ಪ್ರಸಂಶನೀಯ ಎಂದರು.

ಡಾ.ಕೆ.ಎಂ. ಮಾದಪ್ಪ ಅವರು ಆಸ್ಪತ್ರೆಯ ಕಿಡ್ನಿಯ ಸಂಬಂಧ ತಿಂಗಳಿಗೆ 500ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದು ಅದರಂತೆ ದಿನಕ್ಕೆ 15 ರಿಂದ 20 ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. 72 ಕಿಡ್ನಿ ಕಸಿ ಮಾಡಿರುವುದನ್ನು ವೈದ್ಯ ಮತ್ತು ವೈದ್ಯೇತರ ತಂಡವನ್ನು ಶ್ಲಾಘಿಸಿದರು. ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಸಿಗ್ಮಾ ಆಸ್ಪತ್ರೆ ಕಿಡ್ನಿ ಸಂಬಂಧ ಚಿಕಿತ್ಸೆಗೆ ಮತ್ತು ಕಿಡ್ನಿಯಲ್ಲಿನ ಕಲ್ಲುಗಳಿಗೆ ಚಿಕಿತ್ಸೆ ನೀಡುವಲ್ಲಿ ಉನ್ನತ ಆಸ್ಪತ್ರೆ ಆಗಿದೆ. ಹಾಗಾಗಿ ನಾನು ಎಲ್ಲಿ ಹೋದರು ಕಿಡ್ನಿಯಲ್ಲಿನ ಕಲ್ಲು ಅಂದರೆ ಯಾವಾಗಲೂ ಸಿಗ್ಮಾ ಆಸ್ಪತ್ರೆಗೆ ಹೋಗಿ ಎನ್ನುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.