ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಎಚ್‌ಡಿಎಫ್‌ಸಿ ವಿರುದ್ಧ ಮುಂಬೈನ ಪ್ರಸಿದ್ಧ ಲೀಲಾವತಿ ಆಸ್ಪತ್ರೆ ನಡೆಸುವ ಲೀಲಾವತಿ ಟ್ರಸ್ಟ್‌ 1250 ಕೋಟಿ ರು. ವಂಚನೆ ಗಂಭೀರ ಆರೋಪ ಮಾಡಿದೆ.

 ನವದೆಹಲಿ: ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಎಚ್‌ಡಿಎಫ್‌ಸಿ ವಿರುದ್ಧ ಮುಂಬೈನ ಪ್ರಸಿದ್ಧ ಲೀಲಾವತಿ ಆಸ್ಪತ್ರೆ ನಡೆಸುವ ಲೀಲಾವತಿ ಟ್ರಸ್ಟ್‌ 1250 ಕೋಟಿ ರು. ವಂಚನೆ ಗಂಭೀರ ಆರೋಪ ಮಾಡಿದೆ. ಜೊತೆಗೆ ಬ್ಯಾಂಕ್‌ ಸಿಇಒ ವಜಾಕ್ಕೂ ಒತ್ತಾಯಿಸಿದೆ. ಇದು ಎರಡೂ ಸಂಸ್ಥೆಗಳ ನಡುವಿನ ಜಟಾಪಟಿಗೆ ನಾಂದಿ ಹಾಡಿದೆ.

ಲೀಲಾವತಿ ಆಸ್ಪತ್ರೆಯ ಸಿಇಒ ಪರಂಬೀರ್‌ ಸಿಂಗ್‌ ಮತ್ತು ಲೀಲಾವತಿ ಟ್ರಸ್ಟ್‌ನ ಖಾಯಂ ಟ್ರಸ್ಟಿ ಪ್ರಶಾಂತ್ ಮೆಹ್ತಾ ಸುದ್ದಿಗೋಷ್ಠಿ ನಡೆಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಿಇಒ ಮತ್ತು ಎಂಡಿ ಆಗಿರುವ ಶಶಿಧರ್ ಜಗದೀಶನ್ ಮತ್ತು ತಮ್ಮ ಟ್ರಸ್ಟ್‌ನ ಮಾಜಿ ಟ್ರಸ್ಟಿಗಳಾದ ಚಿಂತನ್ ಮೆಹ್ತಾ, ನಿಕೇತ್ ಮೆಹ್ತಾ ಮತ್ತು ರಶ್ಮಿ ಮೆಹ್ತಾರ ವಿರುದ್ಧ ಹಣ ದುರುಪಯೋಗ ಸೇರಿದಂತೆ ಹಲವು ಆಪಾದನೆಗಳನ್ನು ಹೊರಿಸಿದ್ದಾರೆ.

ಕಳೆದ 20 ವರ್ಷಗಳಲ್ಲಿ ಬ್ಯಾಂಕ್‌ನಲ್ಲಿ 1,250 ಕೋಟಿ ರು.ಗೂ ಅಧಿಕ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಜೊತೆಗೆ ಹಣ ದುರುಪಯೋಗ ಪ್ರಕರಣದಲ್ಲಿ 2023ರಲ್ಲೇ ಬ್ಯಾಂಕ್ ಸಿಇಒ ಶಶಿಧರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರೂ ಅವರ ವಿರುದ್ಧ ಬ್ಯಾಂಕ್‌ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೂಡಲೇ ಅವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಎಚ್‌ಡಿಎಫ್‌ಸಿ ಪ್ರತಿಕ್ರಿಯೆ:

ಲೀಲಾವತಿ ಟ್ರಸ್ಟ್‌ನ ಆರೋಪ ಆಧಾರರಹಿತ ಎಂದಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌, ಟ್ರಸ್ಟಿ ಪ್ರಶಾಂತ್‌ ಮೆಹ್ತಾ ಒಡೆತನದ ಕಂಪನಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ 1995ರಲ್ಲಿ ಸಾಲ ಪಡೆದಿದ್ದು ಅದೀಗ 65 ಕೋಟಿಗೆ ತಲುಪಿದೆ. ಅದರ ಪಾವತಿ ತಪ್ಪಿಸಲು ನಡೆಸಿದ ಯತ್ನ ವಿಫಲವಾದ ಹಿನ್ನೆಲೆಯಲ್ಲಿ ಬ್ಯಾಂಕ್‌ ಮತ್ತು ಸಿಇಒ ವಿರುದ್ಧ ವೃಥಾ ಆರೋಪ ಮಾಡುತ್ತಿದೆ ಎಂದು ತಿರುಗೇಟು ನೀಡಿದೆ.