ಆಲಮಟ್ಟಿ ಜಲಾಶಯದ ಎತ್ತರ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ತಕರಾರು ಮಾಡಿರುವುದು ಅಸಮಂಜಸ ಮತ್ತು ರಾಜಕೀಯ ಪ್ರೇರಿತ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರು (ಜೂ.06): ಆಲಮಟ್ಟಿ ಜಲಾಶಯದ ಎತ್ತರ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ತಕರಾರು ಮಾಡಿರುವುದು ಅಸಮಂಜಸ ಮತ್ತು ರಾಜಕೀಯ ಪ್ರೇರಿತ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಕೀಯ ಬೆರೆಸದೆ ಕ್ರಮ ಕೈಗೊಳ್ಳಬೇಕು. ಜತೆಗೆ ಕೇಂದ್ರ ಸರ್ಕಾರ ಕೂಡ ನಡೆದಿರುವ ಎಲ್ಲ ಘಟನಾವಳಿಗಳನ್ನು, ಆದೇಶಗಳನ್ನು ಪರಿಶೀಲಿಸಿ ಕರ್ನಾಟಕದ ಹಿತಾಸಕ್ತಿ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ ಅಡಿ ನಿರ್ಮಾಣವಾಗಿರುವ ಆಲಮಟ್ಟಿ ಸಂಪೂರ್ಣ ಕೃಷ್ಣಾ ಜಲಾನಯನ ಪ್ರದೇಶದ ಒಂದು ಪ್ರಮುಖ ನೀರು ಸಂಗ್ರಹ ಮತ್ತು ವಿತರಣೆಯ ವಾಟರ್ ಗ್ರಿಡ್ ಆಗಿದೆ. ಉತ್ತರ ಕರ್ನಾಟಕದ ಜೀವನದಿಗೆ ಹೃದಯ ಭಾಗವಾಗಿದೆ. ಆಲಮಟ್ಟಿ ಎತ್ತರದ ಬಗ್ಗೆ ಕರ್ನಾಟಕದ ಮೂಲ ಕೃಷ್ಣಾ ಜಲಾನಯನ ಯೋಜನೆಯಲ್ಲಿ ಅಳವಡಿಸಿದೆ. ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆಯನ್ನೂ ಕೊಟ್ಟಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಕೆಡಬ್ಲ್ಯುಡಿ ಟ್ರಿಬ್ಯುನಲ್ ಸ್ವತಂತ್ರವಾಗಿ ಹೈಡ್ರಾಲಾಜಿಕಲ್ ಅಧ್ಯಯನ ಮಾಡಿಸಿ ಎತ್ತರವನ್ನು 524 ಮೀ.ಗೆ ಹೆಚ್ಚಿಸಿದರೂ ಕೊಲ್ಲಾಪುರ, ಸಾಂಗ್ಲಿ ಅಷ್ಟೇ ಅಲ್ಲದೆ, ಮಹಾರಾಷ್ಟ್ರದ ಯಾವುದೇ ಭಾಗ ಮುಳುಗಡೆಯಾಗುವುದಿಲ್ಲ ಎಂಬುದಾಗಿ ಟ್ರಿಬ್ಯುನಲ್‌ ಅಂತಿಮ ತೀರ್ಪು ಕೊಟ್ಟಾಗಿದೆ. ಇದನ್ನು ಮಹಾರಾಷ್ಟ್ರ ಎಲ್ಲೂ ಕಾನೂನಾತ್ಮಕವಾಗಿ ಪ್ರಶ್ನಿಸಿಲ್ಲ. ಅಲ್ಲದೆ, 2005ರ ಪ್ರವಾಹ ಆಲಮಟ್ಟಿ ಹಿನ್ನೀರಿನಿಂದ ಆಗಿಲ್ಲ ಎಂದು ಅಂದಿನ ಕೇಂದ್ರ ಜಲ ಆಯೋಗ ಕೂಡ ತೀರ್ಪು ನೀಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆಲಮಟ್ಟಿ ಡ್ಯಾಂ ನಿರ್ಮಾಣ ಆಗುವ ಮುಂಚೆಯೇ 1960-70 ರ ದಶಕದಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ಸಾಂಗ್ಲಿಯಲ್ಲಿ ಪ್ರವಾಹ ಆಗಿರುವುದು ಗಮನಾರ್ಹ ಎಂದಿದ್ದಾರೆ.

ಜನೌಷಧಿ ಕೇಂದ್ರ ಸ್ಥಗಿತದ ಆದೇಶ ರದ್ದುಪಡಿಸಲು ಆಗ್ರಹ: ಹಾವೇರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಪ್ರಾರಂಭಿಸಲಾದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ರದ್ದುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಈ ಕುರಿತು ಪತ್ರ ಬರೆದಿರುವ ಅವರು, ಹಾವೇರಿ ಜಿಲ್ಲಾ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಮಾಲೀಕರ ಸಂಘದವರು, ಹಾವೇರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.