ಆಲಮಟ್ಟಿ ಆಣೆಕಟ್ಟನ್ನು ಕೇವಲ 1 ಮೀಟರ್ ಎತ್ತರಕ್ಕೆ ಕಾನೂನಾತ್ಮಕ ಸಮಸ್ಯೆ ಇಲ್ಲವಾದರೆ ಮಾಡಲು ಅಡ್ಡಿಯಿಲ್ಲ. ಈ ಬಗ್ಗೆ ಕಾನೂನು ತಜ್ಞರ ತಂಡದ ಜೊತೆ ಸಮಾಲೋಚನೆ ಮಾಡಲಾಗುವುದು ಎಂದು ಸಚಿವ ಡಾ। ಎಂ.ಬಿ.ಪಾಟೀಲ್ ಹೇಳಿದರು.

ವಿಜಯಪುರ (ಜೂ.02): ಆಲಮಟ್ಟಿ ಆಣೆಕಟ್ಟನ್ನು ಕೇವಲ 1 ಮೀಟರ್ ಎತ್ತರಕ್ಕೆ ಕಾನೂನಾತ್ಮಕ ಸಮಸ್ಯೆ ಇಲ್ಲವಾದರೆ ಮಾಡಲು ಅಡ್ಡಿಯಿಲ್ಲ. ಈ ಬಗ್ಗೆ ಕಾನೂನು ತಜ್ಞರ ತಂಡದ ಜೊತೆ ಸಮಾಲೋಚನೆ ಮಾಡಲಾಗುವುದು ಎಂದು ಸಚಿವ ಡಾ। ಎಂ.ಬಿ.ಪಾಟೀಲ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಲಮಟ್ಟಿ ಅಣೆಕಟ್ಟನ್ನು 1 ಮೀ. ಎತ್ತರಿಸುವುದಕ್ಕೆ ಸಂಬಂಧಿಸಿದಂತೆ ಸಚಿವ ಶಿವಾನಂದ ಪಾಟೀಲರ ಸಲಹೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಒಂದು ಮೀಟರ್ ಹೆಚ್ಚಳದಿಂದ ಕಾನೂನು ತೊಡಕು ಇಲ್ಲ ಎಂದರೆ ಮಾಡುವುದರಲ್ಲಿ ಅಭ್ಯಂತರವಿಲ್ಲ ಎಂದು ತಿಳಿಸಿದರು.

1 ಮೀಟರ್ ನೀರು ನಿಲ್ಲಿಸುವುದರಿಂದ ಎಷ್ಟು ಹಳ್ಳಿಗಳನ್ನು ಸ್ಥಳಾಂತರಿಸಬೇಕಾಗುತ್ತದೆ ಎಂಬ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗುವುದು. ಈ ಬಗ್ಗೆ ಸಲಹೆಗಳಿಗೆ ಮುಕ್ತ ಸ್ವಾಗತವಿದೆ ಎಂದರು. ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳದಿಂದ ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾಗುತ್ತದೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿದ ಸಚಿವರು, ಆಲಮಟ್ಟಿ ಡ್ಯಾಂನಿಂದ ಮಹಾರಾಷ್ಟ್ರದಲ್ಲಿ ಯಾವುದೇ ಪ್ರವಾಹವಾಗಿಲ್ಲ. ಅನೇಕ ವರದಿಗಳು ಸಹ ಇದನ್ನು ಧೃಡಪಡಿಸಿವೆ, ಅಲ್ಲಿನ ಪ್ರವಾಹಕ್ಕೂ ಆಲಮಟ್ಟಿ ಡ್ಯಾಂಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಸವ ಭಾರತ ನಿರ್ಮಾಣ ಅಗತ್ಯ: ಮಾನವೀಯ ರಾಷ್ಟ್ರವಾಗಿ ಭಾರತ ಬದಲಾಗಬೇಕಾದರೆ ಬಸವ ಭಾರತ ಆಗಬೇಕಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ವೀರಶೈವ-ಲಿಂಗಾಯತ ಸಮುದಾಯ ರಾಜ್ಯದಲ್ಲಿ 1ಕೋಟಿಗೂ ಅಧಿಕ ಸಂಖ್ಯೆಯಲ್ಲಿದ್ದೇವೆ. ಬಸವಣ್ಣನವರನ್ನು ನಾವು ಕರ್ನಾಟಕ, ಮಹಾರಾಷ್ಟ್ರಕ್ಕಷ್ಟೇ ಮಾತ್ರ ಸೀಮಿತಗೊಳಿಸಿದ್ದೇವೆ. ಬಸವಣ್ಣನವರ ತತ್ವಾದರ್ಶ ಇಡೀ ಭಾರತಕ್ಕೆ ವಿಸ್ತರಿಸಬೇಕು. ಪರಸ್ಪರ ಎಲ್ಲರನ್ನೂ ಅಪ್ಪಿಕೊಳ್ಳುವ ಸಮುದಾಯ ವೀರಶೈವ ಲಿಂಗಾಯತ ಸಮುದಾಯ ಎಂದು ನುಡಿದರು. ಎಲ್ಲ ಸಮುದಾಯದವರಿಗೂ ಅನ್ನ, ಅಕ್ಷರ, ಆರೋಗ್ಯ, ಆಶ್ರಯ ನೀಡುತ್ತಿರುವುದು ನಮ್ಮ ಸಮುದಾಯ. ವೀರಶೈವ-ಲಿಂಗಾಯತ ಪಕ್ಷಾತೀತವಾಗಿ, ಪ್ರಾಂತ್ಯ ಮೀರಿ ಒಗ್ಗೂಡಬೇಕು.

ಸಮುದಾಯದಲ್ಲಿರುವ ಉಪ ಪಂಗಡಗಳನ್ನೂ ಒಗ್ಗೂಡಿಸಿಕೊಳ್ಳಬೇಕು. ನಾವು ಅವರಿಂದ ದೂರ ಆಗಿದ್ದೇವೆ ಎಂಬ ಮನೋಭಾವ ಬಿಡಬೇಕು ಎಂದರು. ಎಲ್ಲಾ ಕಾಯಕ ಸಮುದಾಯಗಳಿಗೆ ಅನುಭವ ಮಂಟಪದಲ್ಲಿ ಸ್ಥಾನ ಇತ್ತು. ಕಲ್ಯಾಣ ಕ್ರಾಂತಿ ಆಗಿದ್ದರೆ ಅರ್ಧ ಕರ್ನಾಟಕದಲ್ಲಿ ನಮ್ಮ ಸಮುದಾಯ ಇರುತ್ತಿತ್ತು. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ದಕ್ಷಿಣ ಕರ್ನಾಟಕ ಎಲ್ಲವೂ ಒಗ್ಗೂಡಬೇಕಿದೆ. ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಸಮುದಾಯದ ವಿಚಾರದಲ್ಲಿ ರಾಜಕಾರಣ ಬಿಟ್ಟು ಒಂದಾಗಬೇಕು. ಇಡೀ ಜಗತ್ತಿಗೆ ಬಸವ ತತ್ವ, ವಚನ ತಲುಪಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಪಕ್ಷಾತೀತವಾಗಿ ಒಗ್ಗೂಡಿ ಹೋರಾಟ ನಡೆಸಬೇಕು. ನಾವೆಲ್ಲರೂ ಕೂಡಿ ಸಮಾಜದ ಸಂಘಟನೆ ಮಾಡಬೇಕಿದೆ. ಇತರರ ಜೊತೆಯೂ ಸೇರಿ ಸೌಹಾರ್ದತೆ ಮುನ್ನಡೆಯುವಂತೆ ತಿಳಿಸಿದರು.