ಬೆಂಗಳೂರು ಸಂಗೀತ ಕಾರ್ಯಕ್ರಮದಲ್ಲಿ ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಗಾಯಕ ಸೋನು ನಿಗಮ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಕ್ಷಮೆ ಯಾಚಿಸಿದ ನಂತರ, ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ಮೇ 15ಕ್ಕೆ ಮುಂದೂಡಲ್ಪಟ್ಟಿದೆ.

Sonu Nigam Kannada Songs Controversy: ಕನ್ನಡ ಹಾಡು ಹಾಡಿ ಎಂದಿದ್ದಕ್ಕೆ, ಪಹಲ್ಗಾಮ್‌ ದಾಳಿಯನ್ನು ನೆನೆದ ಪ್ರಸಿದ್ಧ ಗಾಯಕ ಸೋನು ನಿಗಮ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗ ಎಫ್ಐಆರ್ ರದ್ದುಗೊಳಿಸಲು ಅವರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರಣೆಯನ್ನು ಮೇ 15ಕ್ಕೆ ಮುಂದೂಡಲಾಗಿದೆ.

ಏನಿದು ವಿವಾದ?

ಏಪ್ರಿಲ್ 22 ರಂದು ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಕನ್ನಡದವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರಿಂದ ಕನ್ನಡಿಗರ ಮನಸ್ಸಿಗೆ ನೋವಾಗಿತ್ತು. ಈ ಹಿನ್ನೆಲೆಯಲ್ಲಿ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಗಾಯಕನ ವಿರುದ್ಧ ಎಫ್ಐಆರ್ ದಾಖಲಾಗಿತ್ತು.

ಪೊಲೀಸರು ಸೋನು ನಿಗಮ್‌ಗೆ ಏಳು ದಿನಗಳಲ್ಲಿ ಉತ್ತರಿಸಲು ನೋಟಿಸ್ ನೀಡಿದ್ದರು. ಸೋನು ನಿಗಮ್‌ ಅವರು ಉತ್ತರಿಸದ ಕಾರಣ, ವಿಚಾರಣೆಗೆ ಹಾಜರಾಗಲು ಎರಡನೇ ನೋಟಿಸ್ ನೀಡಿದ್ದರು. ಮೇ 3 ರಂದು ಸೋನು ವಿರುದ್ಧ ಐಪಿಸಿ ಸೆಕ್ಷನ್ 351 (2) (ಕ್ರಿಮಿನಲ್ ಬೆದರಿಕೆ), ಸೆಕ್ಷನ್ 352 (1) (ಶಾಂತಿ ಕದಡುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), ಮತ್ತು ಸೆಕ್ಷನ್ 353 (ಸಾರ್ವಜನಿಕ ಅಶಾಂತಿಗೆ ಪ್ರಚೋದನೆ) ಅಡಿ ಎಫ್ಐಆರ್ ದಾಖಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮರಾಜ್ ಎ. ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ. ಕನ್ನಡ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆ ನೀಡಿದ್ದಕ್ಕಾಗಿ ಸೋನು ವಿರುದ್ಧ ಆರೋಪ ಹೊರಿಸಲಾಗಿದೆ.

ಸೋನು ನಿಗಮ್ ಕ್ಷಮೆ ಯಾಚಿಸಿದ್ದರು

ಎಫ್ಐಆರ್ ನಂತರ, ಮೇ 5 ರಂದು ಸೋನು ನಿಗಮ್ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದರು. ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಬರೆದಿದ್ದರು. 'ಕ್ಷಮಿಸಿ ಕರ್ನಾಟಕ. ನಿಮ್ಮ ಮೇಲಿನ ಪ್ರೀತಿ ನನ್ನ ಅಹಂಕಾರಕ್ಕಿಂತ ದೊಡ್ಡದು. ನಾನು ನಿಮ್ಮನ್ನು ಎಂದೆಂದಿಗೂ ಪ್ರೀತಿಸುತ್ತೇನೆ' ಎಂದು ಬರೆದಿದ್ದರು.

ನಿಜಕ್ಕೂ ಏನಾಗಿತ್ತು?

ಬೆಂಗಳೂರಿನಲ್ಲಿ ಕಾನ್ಸರ್ಟ್‌ ಇತ್ತು. ಆ ವೇಳೆ ಅಭಿಮಾನಿಯೊಬ್ಬ ಕನ್ನಡ ಕನ್ನಡ ಎಂದು ಕೂಗಿದ್ದಾನೆ. ಈ ಥರ ಕೂಗಿರೋದು ಸೋನು ನಿಗಮ್‌ ಅವರಿಗೆ ಸಿಟ್ಟು ತರಿಸಿದೆ. ಆಗ “ನಾನು ಎಲ್ಲ ಭಾಷೆಗಳಲ್ಲಿಯೂ ಹಾಡು ಹಾಡಿದ್ದೇನೆ. ಆದರೆ ನನ್ನ ಜೀವನದಲ್ಲಿ ಕನ್ನಡ ಹಾಡುಗಳು ಮಾತ್ರ ಅತ್ಯುತ್ತಮವಾಗಿವೆ. ನಾನು ಇಲ್ಲಿಗೆ ಬರುವಾಗ ಬಹಳ ಪ್ರೀತಿಯಿಂದ ಬರುತ್ತೇನೆ. ನಾವು ಪ್ರತಿದಿನವೂ ಇವೆಂಟ್‌ಗಳನ್ನು ಮಾಡುತ್ತೇವೆ, ಆದರೆ ಕರ್ನಾಟಕದಲ್ಲಿ ಎಲ್ಲಿಯೇ ಕಾರ್ಯಕ್ರಮವಿರಲೀ, ಬಹಳ ಗೌರವದಿಂದ, ಖುಷಿಯಿಂದ ಬರ್ತೀವಿ ಎನ್ನೋದು ಪಕ್ಕಾ. ನೀವೆಲ್ಲರೂ ನಮ್ಮನ್ನು ನಿಮ್ಮ ಕುಟುಂಬ ಎನ್ನುವ ಹಾಗೆ ಸ್ವೀಕರಿಸಿದ್ದೀರಿ ಅಂತಲೇ ಖುಷಿಯಿಂದ ಬರ್ತೀವಿ" ಎಂದು ಅವರು ಹೇಳಿದರು. 

ಸೋನು ನಿಗಮ್‌ ಕ್ಷಮೆ ಕೇಳಿದರೂ ಕೂಡ ಕರ್ನಾಟಕ ಚಲನಚಿತ್ರ ಮಂಡಳಿಯು ಕನ್ನಡ ಸಿನಿಮಾಗಳಲ್ಲಿ ಸೋನು ನಿಗಮ್‌ ಅವರಿಂದ ಹಾಡಿಸಬಾರದು, ಕರ್ನಾಟಕದಲ್ಲಿ ಕಾನ್ಸರ್ಟ್‌ ಮಾಡಿಸಬಾರದು ಎಂದು ಹೇಳಿದೆ. ಒಗ್ಗಟ್ಟಿನಿಂದ ಸೋನು ನಿಗಮ್‌ ಅವರನ್ನು ಬ್ಯಾನ್‌ ಮಾಡಲು ಸಜ್ಜಾಗಿದೆ. ಅಂದಹಾಗೆ ಕನ್ನಡದ ʼಕುಲದಲ್ಲಿ ಕೀಳ್ಯಾವುದೋʼ ಸಿನಿಮಾದಲ್ಲಿ ಸೋನು ನಿಗಮ್‌ ಹಾಡಿದ್ದ ಹಾಡನ್ನು ಡಿಲಿಟ್‌ ಕೂಡ ಮಾಡಿಸಲಾಗಿದೆ.