ನಾಳೆ (ಜೂನ್ 6) ವಿಶ್ವ ಪರಿಸರ ದಿನ. ಸಾವಿರಾರು ಗಿಡಗಳನ್ನು ಗಿಡಗಳನ್ನು ನೆಟ್ಟು ರಕ್ಷಿಸಿ ಪೋಷಿಸುತ್ತಿರುವ ಚಾಮರಾಜನಗರದ ಸಿ.ಎಂ. ವೆಂಕಟೇಶ್ 2024-25 ನೇ ಸಾಲಿನ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವರದಿ: ಪುಟ್ಟರಾಜು.ಆರ್.ಸಿ ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಜೂ.04): ನಾಳೆ (ಜೂನ್ 6) ವಿಶ್ವ ಪರಿಸರ ದಿನ. ಸಾವಿರಾರು ಗಿಡಗಳನ್ನು ಗಿಡಗಳನ್ನು ನೆಟ್ಟು ರಕ್ಷಿಸಿ ಪೋಷಿಸುತ್ತಿರುವ ಚಾಮರಾಜನಗರದ ಸಿ.ಎಂ. ವೆಂಕಟೇಶ್ 2024-25 ನೇ ಸಾಲಿನ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸ್ವಚ್ವ ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ವೆಂಕಟೇಶ್ ಅವರ ಸಾಧನೆ ಕುರಿತು ಒಂದು ವರದಿ. ಕೆಲ ವರ್ಷಗಳ ಹಿಂದೆ ರಸ್ತೆ ಅಗಲೀಕರಣದ ನೆಪದಲ್ಲಿ ಮರಗಿಡಗಳನ್ನು ಕಡಿದು ಬೋಳುಬೋಳಾಗಿದ್ದ ಚಾಮರಾಜನಗರದಲ್ಲಿ ಮತ್ತೆ ಮರಗಿಡಗಳು ತಲೆ ಎತ್ತಿ ನಳನಳಸುತ್ತಿವೆ, ನಗರದಲ್ಲಿ ಜನತೆ ಒಂದಷ್ಟು ಶುದ್ದಗಾಳಿ ಉಸಿರಾಡುತ್ತಿದ್ದಾರೆ, ರಸ್ತೆ ಬದಿಯ ದಾರಿಹೋಕರಿಗೆ ಒಂದಷ್ಟು ನೆರಳು ಸಿಗುತ್ತಿದೆ, ನಗರದ ಬಹುತೇಕ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಪಿಲಿ ಕೇಳುತ್ತಿದೆ ಎಂದರೆ ಅದಕ್ಕೆಲ್ಲಾ ಸಿ.ಎಂ. ವೆಂಕಟೇಶ್ ಕಾರಣ ಎಂದರೆ ಅತಿಶಯೋಕ್ತಿಯಲ್ಲ.
ಪರಿಸರ ರಕ್ಷಣೆಗೆ ಜೀವನವನ್ನು ಮುಡಿಪಾಗಿಟ್ಟಿರುವ ಸಾಲಿನಲ್ಲಿ ಸಾಲುಮರದ ವೆಂಕಟೇಶ್ ಸಹ ನಿಲ್ಲುತ್ತಾರೆ. ಪರಿಸರಕ್ಕೆ ಒಳಿತು ಮಾಡುವ ಕೆಲಸ ಮಾಡುತ್ತಿರುವ ವೆಂಕಟೇಶ್ ಜಿಲ್ಲೆಯಾದ್ಯಂತ ಇದುವರೆಗೆ 15 ಸಾವಿರಕ್ಕು ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಿ ಬೆಳಸುತ್ತಿದ್ದಾರೆ. ರಸ್ತೆ ಬದಿ, ಶಾಲೆಗಳ ಆವರಣ, ಕ್ರೀಡಾಂಗಣ ಹೀಗೆ ಅಗತ್ಯ ಇರುವ ಕಡೆಗಳಲ್ಲಿ ಗಿಡಗಳನ್ನು ನೆಡುವುದು, ಅವುಗಳ ರಕ್ಷಣೆಗೆ ಟ್ರೀ ಗಾರ್ಡ್ ಅಳವಡಿಸುವುದು ನೀರು ಹಾಕುವುದು, ಗೊಬ್ಬರ ಹಾಕುವುದು, ರೋಗ ಬಂದರೆ ಅವುಗಳಿಗೆ ಔಷಧಿ ಸಿಂಪಡಿಸುವುದು, ಸಮರ್ಪಕವಾಗಿ ಬೆಳೆಯದ ಗಿಡಗಳಿಗೆ ಗೊಬ್ಬರ ಪೋಷಕಾಂಶ ನೀಡುವುದು ಸೇರಿದಂತೆ ಗಿಡಗಳ ಪೋಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ ವೆಂಕಟೇಶ್.
ಸಾಲು ಮರದ ತಿಮ್ಮಕ್ಕನ ಹಾದಿಯಲ್ಲಿ ಸಾಗುತ್ತಿರುವ ಸಿ ಎಂ ವೆಂಕಟೇಶ್ ಅವರಿಗೆ ಕರ್ನಾಟಕ ಸರ್ಕಾರ 2024_25 ನೇ ಸಾಲಿನ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಘೋಷಿಸಿದೆ. ಗಾಯಕರು ಆಗಿರುವ ಸಿ.ಎಂ. ವೆಂಕಟೇಶ್ ಒಂಭತ್ತು ವರ್ಷಗಳ ಹಿಂದೆ ಎಸ್.ಪಿ. ಬಾಲಸುಬ್ರಮಣ್ಯಂರವರ ಜನುಮ ದಿನದ ಅಂಗವಾಗಿ ಗಿಡನೆಡುವ ಕಾಯಕ ಪ್ರಾರಂಭಿಸಿರುವ ಸಿ.ಎಂ. ವೆಂಕಟೇಶ್ ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಅವುಗಳು ಹೆಮ್ಮರವಾಗುವುದನ್ನು ನೋಡಬೇಕೆನ್ನುವ ಕನಸು ಹೊತ್ತಿದ್ದಾರೆ. ಸದಾ ಗಿಡಮರಗಳ ಬಗ್ಗೆಯೇ ಯೋಚಿಸುವ ವೆಂಕಟೇಶ್ ಅವರಿಗೆ ಈ ಬಾರಿ ಕರ್ನಾಟಕ ಸರ್ಕಾರ 2024-25 ನೇ ಸಾಲಿನ ಪರಿಸರ ಪ್ರಶಸ್ತಿ ಘೋಷಿಸುವ ಮೂಲಕ ಗೌರವ ಸಲ್ಲಿಸಿದೆ.
ಜಿಲ್ಲೆ ಜನತೆಯ ಪರವಾಗಿ ಅಭಿನಂದಿಸುತ್ತೆವೆ ಅವರಿಗೆ ಇನ್ನು ಹೆಚ್ಚಿನ ಪ್ರಶಸ್ತಿ ಲಭಿಸಲಿ ಎಂದು ಹಾರೈಸುತ್ತೆವೆ. ವೃತ್ತಿಯಲ್ಲಿ ಲೆಕ್ಕಪರಿಶೋಧಕರಾಗಿರುವ ವೆಂಕಟೇಶ್ ತಮ್ಮ ದುಡಿಮೆಯ ಬಹುಪಾಲು ಹಣವನ್ನು ಗಿಡ ನೆಟ್ಟು ಪೋಷಿಸುವುದಕ್ಕೆ ವ್ಯಯ ಮಾಡುತ್ತಿದ್ದಾರೆ ಚಾಮರಾಜನಗರ ಜಿಲ್ಲೆಯನ್ನು ಹಸಿರೀಕರಣ ಮಾಡಬೇಕು, ಒಳ್ಳೆಯ ವಾತಾವರಣ, ಉತ್ತಮ ಪರಿಸರ ನಿರ್ಮಾಣ ಮಾಡಬೇಕು, ಜನರಿಗೆ ಸ್ವಚ್ಚ ಗಾಳಿ ಸಿಗಬೇಕು, ರಸ್ತೆ ಬದಿ ಸಂಚರಿಸುವವರಿಗೆ ನೆರಳಿನ ವ್ಯವಸ್ಥೆಯಾಗಬೇಕು, ತಾವು ನೆಟ್ಟ ಗಿಡಮರಗಳು ಪಕ್ಷಿಗಳಿಗೆ ಆಶ್ರಯತಾಣವಾಗಿ ಪಕ್ಷಿಗಳ ಕಲರವ ಕೇಳಬೇಕು ಎಂಬ ಕನಸುಗಳನ್ನು ಹೊತ್ತು ಮುಂದಡಿ ಇಡುತ್ತಿರುವ ವೆಂಕಟೇಶ್ ಕಾರ್ಯ ನಿಜಕ್ಕೂ ಶ್ಲಾಘನೀಯ.