'ಕಾಮಿಡಿ ಕಿಲಾಡಿಗಳು', 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಖ್ಯಾತಿಯ ರಾಕೇಶ್ ಪೂಜಾರಿ (೩೦) ಮೇ ೧೨ರಂದು ಕಾರ್ಕಳದಲ್ಲಿ ನಿಧನರಾದರು. ಕಡಿಮೆ ರಕ್ತದೊತ್ತಡದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ತಂದೆಯನ್ನು ಕಳೆದುಕೊಂಡ ನೋವನ್ನು ಹಂಚಿಕೊಂಡಿದ್ದ ರಾಕೇಶ್, ಜನಪ್ರಿಯತೆಯಿಂದ ಸಿಕ್ಕ ಗೌರವದ ಬಗ್ಗೆಯೂ ಮಾತನಾಡಿದ್ದರು.
ʼಕಾಮಿಡಿ ಕಿಲಾಡಿಗಳುʼ, ʼಹಿಟ್ಲರ್ ಕಲ್ಯಾಣʼ ಧಾರಾವಾಹಿ ಖ್ಯಾತಿಯ ರಾಕೇಶ್ ಪೂಜಾರಿ ಅವರು ಉಡುಪಿಯ ಕಾರ್ಕಳದಲ್ಲಿ ತೀರಿಕೊಂಡಿದ್ದಾರೆ. ಮೇ 12ರಂದು ಬೆಳಗ್ಗಿನ ಜಾವ 1.30ಗೆ ನಿಧನರಾಗಿದ್ದಾರೆ. ಲೋ ಬಿಪಿ ಆಗಿ ಆಸ್ಪತ್ರೆಗೆ ಸೇರಿಸಿದರೂ ಕೂಡ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಹಿಂದೆ ರಾಕೇಶ್ ತಂದೆ ಕೂಡ ತೀರಿಕೊಂಡಿದ್ದರು. ತಂದೆಯ ಬಗ್ಗೆ ಹೆಗ್ಗದ್ದೆ ಸ್ಟುಡಿಯೋ ಯುಟ್ಯೂಬ್ ಚಾನೆಲ್ಗೆ ರಾಕೇಶ್ ಪೂಜಾರಿ ಅವರು ನೀಡಿದ ಸಂದರ್ಶನ ಇಲ್ಲಿದೆ.
ಸಾಯುವಾಗ ನನ್ನ ತಂದೆಗೆ ನನ್ನ ಮೇಲೆ ನಂಬಿಕೆ ಬಂದಿತ್ತು!
“ನನ್ನ ತಂದೆ ಸಾವಾಗಿ ಎರಡು ವರ್ಷ ಆಯ್ತು. ನಾನು ಕಾಮಿಡಿ ಕಿಲಾಡಿಗಳು ಶೋ ವಿನ್ನರ್ ಆಗಬೇಕು ಅಂತಿದ್ದಾಗ ಅವರ ಸಾವಾಯ್ತು. ನಾನು ಸೋತಾಗ ಒಮ್ಮೆ ಬೈದ್ರೂ ಕೂಡ, ಮತ್ತೆ ಇನ್ನೇನು ಮಾಡ್ತೀಯಾ ಅಂತ ಕೇಳುತ್ತಿದ್ದರು. ದುಬೈನಲ್ಲಿ ನನ್ನ ತಂದೆ ಕೆಲಸ ಮಾಡುತ್ತಿದ್ದರು, ಸಂಬಂಧಿಕರು ಕೂಡ ಅಲ್ಲೇ ಇದ್ದರು. ನನಗೆ ಅಲ್ಲಿಗೆ ಹೋಗಲು ಮೂರು ನಾಲ್ಕು ಆಫರ್ ಇತ್ತು. ಬೇರೆಯವರ ಹೊಟ್ಟೆಗೆ ಒದೆಯಬೇಡ, ಬೇರೆಯವರ ಊಟ ಕಿತ್ಕೋಬೇಡ. ನೀನು ಸ್ವಲ್ಪ ಕಮ್ಮಿ ತಿಂದರೂ ಪರವಾಗಿಲ್ಲ, ಚೆನ್ನಾಗಿ ತಿನ್ನು ಅಂತ ಹೇಳುತ್ತಿದ್ದರು. ನಾನು ಚಿಕ್ಕ ವಯಸ್ಸಿನಿಂದ ನನಗೆ 30 ವರ್ಷ ಆಗೋವರೆಗೂ ಅವರು ನನ್ನ ವಿಚಾರದಲ್ಲಿ ಭಯದಲ್ಲೇ ಇದ್ದರು. ಅಪ್ಪನನ್ನು ಕಂಡರೆ ನನಗೆ ತುಂಬ ಭಯ, ಹೀಗಾಗಿ ನಾನು ಅವರ ಜೊತೆ ಜಾಸ್ತಿ ಬಾಂಡಿಂಗ್ಹೊಂದಿರಲಿಲ್ಲ. ನಾನು ಕುಟುಂಬವನ್ನು ನೋಡಿಕೊಳ್ಳಬಲ್ಲೆ ಎಂದು ಅವರಿಗೆ ನಂಬಿಕೆ ಬರುವ ಟೈಮ್ನಲ್ಲಿ ಅವರು ತೀರಿ ಹೋದರು. ತಂದೆ ಕಣ್ಣಲ್ಲಿ ಒಂದು ಸಂತೃಪ್ತಿ ಇದೆ ಎನ್ನುವ ಭಾವ ನನಗೆ ಇದೆ” ಎಂದು ರಾಕೇಶ್ ಪೂಜಾರಿ ಹೇಳಿದ್ದಾರೆ.
ಮಾತ್ರೆ ತಗೊಳ್ಳದೆ ನನ್ನ ತಂದೆ ಆರೋಗ್ಯದಲ್ಲಿ ವೈಪರೀತ್ಯ ಆಯ್ತು!
“ನನ್ನ ತಾಯಿ ತಂಗಿ ಸರ್ಪ ಕಚ್ಚಿ ತೀರಿಕೊಂಡಿದ್ದರು. ಚಿಕ್ಕಮ್ಮ ತೀರಿಕೊಂಡಿದ್ದಕ್ಕೆ ಅಪ್ಪ-ಅಮ್ಮ ತುಂಬ ಬೇಸರ ಮಾಡಿಕೊಂಡಿದ್ದರು. ನನ್ನ ತಂದೆಗೆ ಶುಗರ್, ಬಿಪಿ ಎಲ್ಲವೂ ಇತ್ತು. ಚಿಕ್ಕಮ್ಮ ತೀರಿಕೊಂಡ ಟೈಮ್ನಲ್ಲಿ ಅವರು ಸರಿಯಾಗಿ ಮಾತ್ರೆ ಕೂಡ ತಗೊಂಡಿರಲಿಲ್ಲ. ತಂದೆ ಬಿಪಿ ವೇರಿಯೇಶನ್ಸ್ ಆಗಿ ಅಪ್ಪನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎನ್ನುವಾಗ ಪ್ರಾಣ ಬಿಟ್ಟರು. ತಂದೆ ಪ್ರಾಣ ಬಿಡೋವಾಗ ನಾನು ಅಲ್ಲಿ ಇರಲಿಲ್ಲ ಎನ್ನುವ ಬೇಸರ ಇದೆ” ಎಂದು ರಾಕೇಶ್ ಪೂಜಾರಿ ಹೇಳಿದ್ದಾರೆ.
ಎಲ್ಲಿ ಹೋದ್ರೂ ಫೋಟೋ ತಗೊಳ್ತಾರೆ!
“ಕಾಮಿಡಿ ಕಿಲಾಡಿಗಳು ಶೋನ ನಂತರ ಜನರು ನನ್ನನ್ನು ಗುರುತಿಸಲು ಶುರು ಮಾಡಿದರು. ಉಡುಪಿಯಲ್ಲಿ ಲೋಕಲ್ಚಾನೆಲ್ನಲ್ಲಿ ಕಾಮಿಡಿ ಶೋ ಮಾಡುವಾಗ ಜನರು ಗುರುತಿಸಿ ಮಾತನಾಡುತ್ತಿದ್ದರು. ನನ್ನ ತಂದೆ-ತಾಯಿ ಹೊರಗಡೆ ಹೋದಾಗಲೂ ಕೂಡ ನನ್ನ ಬಗ್ಗೆ ಹೊಗಳಿ, ಒಳ್ಳೆಯ ಗೌರವ ಕೊಡುತ್ತಿದ್ದರು. ನಾನು ಅಂದುಕೊಳ್ಳದ ಜಾಗದಲ್ಲಿ ನನಗೆ ಗೌರವ ಸಿಗುತ್ತಿರೋದು ಖುಷಿಯಾಗಿದೆ. ಇದೇ ನನ್ನ ದೊಡ್ಡ ಸಂಪಾದನೆ. ನನಗೇ ಇರಲೀ, ನನ್ನ ತಾಯಿಗೇ ಇರಲಿ ಬಹುಬೇಗ ಕೆಲಸ ಮಾಡಿಸಿಕೊಳ್ತಾರೆ. ಇನ್ನೊಂದು ಕಡೆ ನಮ್ಮನ್ನು ಫೂಲ್ಮಾಡಿ ಕೆಲಸ ಮಾಡಿಸಿಕೊಳ್ತಾರೆ. ಫಂಕ್ಷನ್ಗೆ ಹೋದಾಗ ಊಟ ಮಾಡುವಾಗಲೂ ಫೋಟೋ ತಗೋಳೋಕೆ ಬರ್ತಾರೆ. ಅಲ್ಲಿ ತಿನ್ನೋಕೆ ಬಿಡೋದಿಲ್ಲವಲ್ಲ ಎಂಬ ಬೇಸರ ಇದೆ. ಆಗ ನನಗಿಂತ ಜಾಸ್ತಿ ನನ್ನ ಹೊಟ್ಟೆಗೆ ಬೇಸರ ಆಗತ್ತೆ” ಎಂದು ರಾಕೇಶ್ ಪೂಜಾರಿ ಹೇಳಿದ್ದಾರೆ.
ರಾಕೇಶ್ ಪೂಜಾರಿ ಅವರು ʼಹಿಟ್ಲಲ್ ಕಲ್ಯಾಣʼ ಧಾರಾವಾಹಿಯಲ್ಲಿ ಹೀರೋ ಪಿಎ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಪಕ್ಕಾ ಕಾಮಿಡಿ ಪಾತ್ರ ಆಗಿತ್ತು. ಜನರಿಗೆ ಈ ಪಾತ್ರ ತುಂಬ ಇಷ್ಟ ಆಗ್ತಿತ್ತು.