ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯಲಕ್ಷ್ಮಿ ಕಾಲೋನಿಯಲ್ಲಿ ರೌಡಿ ಪುನೀತ್ ಅಲಿಯಾಸ್ ನೇಪಾಳಿ ಪುನೀತ್ನ ಕೊಲೆ ಕೇಸ್ನಲ್ಲಿ ಆಘಾತಕಾರಿ ಬೆಳವಣಿಗೆ ನಡಿದಿದ್ದು, ಈ ಪ್ರಕರಣದಲ್ಲಿ ಕೊಲೆಗೆ ಯತ್ನಿಸಿದವನೇ ಕೊಲೆಗೀಡಾಗಿದ್ದಾನೆ.
ಬೆಂಗಳೂರು (ಜೂ.12): ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯಲಕ್ಷ್ಮಿ ಕಾಲೋನಿಯಲ್ಲಿ ರೌಡಿ ಪುನೀತ್ ಅಲಿಯಾಸ್ ನೇಪಾಳಿ ಪುನೀತ್ನ ಕೊಲೆ ಕೇಸ್ನಲ್ಲಿ ಆಘಾತಕಾರಿ ಬೆಳವಣಿಗೆ ನಡಿದಿದ್ದು, ಈ ಪ್ರಕರಣದಲ್ಲಿ ಕೊಲೆಗೆ ಯತ್ನಿಸಿದವನೇ ಕೊಲೆಗೀಡಾಗಿದ್ದಾನೆ. ಘಟನೆಯ ಲೈವ್ ದೃಶ್ಯ ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಎಕ್ಸ್ಕ್ಲೂಸಿವ್ ದೃಶ್ಯ ಲಭ್ಯವಾಗಿದೆ.
ಘಟನೆ ಹಿನ್ನೆಲೆ: ಹತ್ಯೆಯಾದ ಪುನೀತ್, ಆರೋಪಿ ರೌಡಿ ಮಹೇಶ್ನಿಂದ 40 ಸಾವಿರ ರೂಪಾಯಿಗೆ ಬೈಕ್ ಖರೀದಿಸಿದ್ದ. ಆದರೆ, ಹಣವನ್ನು ಸಮಯಕ್ಕೆ ಪಾವತಿಸದೆ ಸತಾಯಿಸುತ್ತಿದ್ದ ಪುನೀತ್, ಕೊನೆಗೆ ಹಣ ಕೊಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಪದೇಪದೆ ಹಣ ಕೇಳಿದ್ರೆ ಮಗಳನ್ನು ಕಿಡ್ನಾಪ್ ಮಾಡುವುದಾಗಿಯೂ ಮಹೇಶ್ಗೆ ಧಮಕಿ ಹಾಕಿದ್ದ. ಈ ವಿಷಯವನ್ನು ರೌಡಿ ಶ್ರೀಕಾಂತ್ ಜೊತೆ ಚರ್ಚಿಸಿದ ಮಹೇಶ್, ಪುನೀತ್ನೊಂದಿಗೆ ರಾಜಿಯಾಗಲು ಯತ್ನಿಸಿದ್ದ. ಆದರೆ ರೌಡಿ ಪುನೀತ್ ಶ್ರೀಕಾಂತ್, ಮಹೇಶ್ ಇಬ್ಬರಿಗೂ ಕೊಲೆ ಬೆದರಿಕೆ ಒಡ್ಡಿದ್ದ.
ನಡು ರಸ್ತೆಯಲ್ಲಿ ದಾರುಣ ಕೃತ್ಯ:
ಎರಡು ದಿನಗಳ ಹಿಂದೆ ಪುನೀತ್ ಮತ್ತು ಅರ್ಬಾಜ್, ಮಹೇಶ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲು ಯತ್ನಿಸಿದ್ದರು. ಆದರೆ ಮಹೇಶ್ ಮಚ್ಚನ್ನು ಕಸಿದುಕೊಂಡು ಅರ್ಬಾಜ್ನ ಮೇಲೆಯೇ ಬೀಸಿದ್ದ. ಸಣ್ಣಪುಟ್ಟ ಗಾಯಗಳೊಂದಿಗೆ ಅರ್ಬಾಜ್ ತಪ್ಪಿಸಿಕೊಂಡು ಓಡಿಹೋಗಿದ್ದಾನೆ. ಆದರೆ ಮಹೇಶ್ನ ಕೈಗೆ ಸಿಕ್ಕಿಬಿದ್ದಿದ್ದ ಪುನೀತ್ ಮೇಲೆ ಎರಗಿ ನಡು ರಸ್ತೆಯಲ್ಲೇ ಕೊಚ್ಚಿ ಕೊಂದಿದ್ದಾನೆ.
ಆರೋಪಿಗಳ ಬಂಧನ:
ಪುನೀತ್ ಕೊಲೆಯಲ್ಲಿ ಮಹೇಶ್ಗೆ ಸಾಥ್ ನೀಡಿದ ಶ್ರೀಕಾಂತ್, ರಾಜೇಶ್, ಮತ್ತು ಸುಮಂತ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದು, ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಕಾಡುಗೋಡಿ ಪೊಲೀಸರಿಂದ ತನಿಖೆ ಜಾರಿಯಲ್ಲಿದ್ದು, ಕೊಲೆಯ ಹಿನ್ನೆಲೆಯ ಕುರಿತು ಮತ್ತಷ್ಟು ವಿವರಗಳು ಬಹಿರಗೊಳ್ಳುವ ನಿರೀಕ್ಷೆಯಿದೆ.