ಸ್ನೇಹಿತರಿಬ್ಬರ ಒಡನಾಟ, ಅವರಿಗೊಂದು ನಾಯಿ ಮರಿ ಸಿಗುವುದು, ಅಲ್ಲಿಂದ ಅವನ ಬದುಕು ಬದಲಾಗುವುದು, ವಲಸೆ ಕಾರ್ಮಿಕರ ಕಷ್ಟಗಳು, ವಿಧಾನಸೌಧ ನೋಡುವ ಆಸೆ ಹೀಗೆ ವಿವಿಧ ವಿಚಾರಗಳು ಅನಾವರಣಗೊಳ್ಳುತ್ತವೆ.
ರಾಜೇಶ್ ಶೆಟ್ಟಿ
ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ವಲಸೆ ಬರುವ ಉತ್ತರ ಕರ್ನಾಟಕದ ಒಂದು ಬಡ ಕುಟುಂಬದ ಕಥೆ. ಆ ಕುಟುಂಬದ ಮುಗ್ಧ ಹುಡುಗನೊಬ್ಬನ ಭಾವನಾತ್ಮಕ ಕಥೆ. ಕಟ್ಟಡ ನಿರ್ಮಾಣ ಕೆಲಸಕ್ಕೆ ಕುಟುಂಬವೊಂದು ಬೆಂಗಳೂರಿಗೆ ಬರುವ ಮೂಲಕ ಕತೆ ಶುರುವಾಗುತ್ತದೆ. ತಂದೆ, ತಾಯಿ ಮತ್ತು ಅವರಿಗೊಬ್ಬ ಮಗ. ತಂದೆ, ತಾಯಿ ಕಟ್ಟಡ ನಿರ್ಮಾಣಕ್ಕೆ ಹೋದರೆ ಪುಟ್ಟ ಹುಡುಗ ಶಾಲೆಗೆ ಹೋಗುತ್ತಾನೆ. ಅಲ್ಲೊಬ್ಬ ಸ್ನೇಹಿತ ಸಿಕ್ಕಿ ಅವನೊಂದು ಪುಟ್ಟ ಜಗತ್ತು ಕಟ್ಟಿಕೊಳ್ಳುತ್ತಾನೆ. ಅವರಿಬ್ಬರ ಕಣ್ಣಿನಲ್ಲಿ ಬದುಕನ್ನು, ಬೆಂಗಳೂರನ್ನು ಕಾಣಿಸುತ್ತಾ ಹೋಗುತ್ತಾರೆ ನಿರ್ದೇಶಕರು.
ಸ್ನೇಹಿತರಿಬ್ಬರ ಒಡನಾಟ, ಅವರಿಗೊಂದು ನಾಯಿ ಮರಿ ಸಿಗುವುದು, ಅಲ್ಲಿಂದ ಅವನ ಬದುಕು ಬದಲಾಗುವುದು, ವಲಸೆ ಕಾರ್ಮಿಕರ ಕಷ್ಟಗಳು, ವಿಧಾನಸೌಧ ನೋಡುವ ಆಸೆ ಹೀಗೆ ವಿವಿಧ ವಿಚಾರಗಳು ಅನಾವರಣಗೊಳ್ಳುತ್ತವೆ. ಒಂದು ಬದುಕನ್ನು ಹಾಗೇ ತೆರೆದಿಟ್ಟಂತೆ ಕತೆ ಹೇಳುತ್ತಾರೆ. ಯಾವುದೇ ಉತ್ಪ್ರೇಕ್ಷೆ ಇಲ್ಲ. ಯಾವುದೇ ವೈಭವೀಕರಣ ಇಲ್ಲ. ಸಿದ್ಧ ಸೂತ್ರಗಳಿಲ್ಲ. ಅಷ್ಟರಮಟ್ಟಿಗೆ ಒಂದು ಪ್ರಾಮಾಣಿಕ ಪ್ರಯತ್ನ.
ಚಿತ್ರ: ಪಪ್ಪಿ
ನಿರ್ದೇಶನ: ಆಯುಷ್ ಮಲ್ಲಿ
ತಾರಾಗಣ: ಆದಿತ್ಯ ಸಿಂಧನೂರು, ಜಗದೀಶ್ ಕೊಪ್ಪಳ, ದುರುಗಪ್ಪ ಕಂಬ್ಳಿ, ರೇಣುಕಾ, ಕನಕಪ್ಪ, ಆರವ್, ಕಾವ್ಯ ಹೊಸಪೇಟೆ
ರೇಟಿಂಗ್: 3
ಉತ್ತರ ಕರ್ನಾಟಕ ಭಾಷೆಯ ಮೂಲಕ, ಚುರುಕು ಸಂಭಾಷಣೆಯ ಮೂಲಕ, ಆಪ್ತ ನಟನೆಯ ಮೂಲಕ, ಕಟು ವಾಸ್ತವ ದಾಟಿಸುವ ಮೂಲಕ ಈ ಸಿನಿಮಾ ಅಲ್ಲಲ್ಲಿ ತಾಕುತ್ತದೆ. ಅದರ ಹೊರತಾಗಿ ಸಾಕಷ್ಟು ಸಾವಧಾನ ಬೇಡುತ್ತದೆ. ಕೆಲವು ಅಂಶಗಳು ಪುನರಾವರ್ತನೆ ಅನ್ನಿಸುತ್ತದೆ. ಏನೂ ತೀವ್ರವಾದದ್ದು ಘಟಿಸದೇ ಇರುವಾಗ ತುಂಬಾ ಹಗುರ ಅನ್ನಿಸುತ್ತದೆ. ಅದರ ಹೊರತಾಗಿ ಇದೊಂದು ಗಮನಿಸಬಹುದಾದ ಪ್ರಯತ್ನ. ನಿರ್ದೇಶಕರ ಪ್ರಾಮಾಣಿಕ ಸಿನಿಮಾ ಒಲವು, ಕಲಾವಿದರ ಸಹಜ ಮುಗ್ಧ ಅಭಿನಯ, ಬದುಕಿನ ಸಂಕಷ್ಟದ ಚಿತ್ರಗಳನ್ನು ಭಾರವಾಗದಂತೆ ಹಾಗ್ಹಾಗೇ ಕಾಣಿಸುವ ಶೈಲಿ ಇವೆಲ್ಲದರ ಕಾರಣಕ್ಕೆ ಈ ಸಿನಿಮಾ ವಿಭಿನ್ನವಾಗಿ ನಿಲ್ಲುತ್ತದೆ.