ಕಾಡುವ ಚಿತ್ರಗಳ ಕತೆ ಏನು ಅಂತ ಕೇಳುವುದಕ್ಕಿಂತ ನೋಡುವುದು ಉತ್ತಮ. ಶ್ರೇಯಸ್ ಅಭಿನಯ, ಡ್ಯಾನ್ಸ್, ಫೈಟ್, ಡೈಲಾಗ್ನಲ್ಲಿ ಮಾತ್ರವಲ್ಲ ಎಮೋಷನ್ ದೃಶ್ಯಗಳಲ್ಲೂ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದ್ದಾರೆ.
ಆರ್.ಕೇಶವಮೂರ್ತಿ
ತುಂಬಾ ದಿನಗಳ ನಂತರ ಕತ್ತಲು, ಕಪ್ಪು ಧೂಳು, ರಕ್ತಪಾತದ ನೆರಳಿನ ಹೊರತಾಗಿರುವ ಸಿನಿಮಾ ಬಂದಿದೆ. ಸಿಂಪಲ್ ಮತ್ತು ಎಲ್ಲರಿಗೂ ಅರ್ಥವಾಗುವಂತಹ ಕತೆ, ಅದಕ್ಕೆ ತಕ್ಕಂತೆ ಮೇಕಿಂಗ್, ಎಲ್ಲರಿಗೂ ಇಷ್ಟವಾಗುವ ಕತೆ. ಅದರಲ್ಲೂ ಈಗಿನ ಜನರೇಷನ್ಗೆ ಹತ್ತಿರವಾಗುವ ಪ್ರೇಮಕತೆಯನ್ನು ಒಳಗೊಂಡ ಚಿತ್ರವಿದು. ಪ್ರೀತಿಗೆ ಸಾವಿಲ್ಲ ಎಂಬುದನ್ನು ನಿರ್ದೇಶಕ ವಿ ಕೆ ಪ್ರಕಾಶ್ ಅವರು ವಿಷ್ಣು ಮತ್ತು ಪ್ರಿಯಾ ಪಾತ್ರಗಳ ಮೂಲಕ ಸರಳವಾಗಿ ಹೇಳಿದ್ದಾರೆ.
ಆಕಸ್ಮಿಕವಾಗಿ ಹುಟ್ಟಿಕೊಳ್ಳುವ ಪ್ರೀತಿ, ಇನ್ನೇನು ಕೈ ತಪ್ಪುವ ಹಂತಕ್ಕೆ ಬಂದಾಗ ಹುಡುಗ- ಹುಡುಗಿಯ ಸಂಕಟಗಳು, ಹೆತ್ತವರ ಕಳವಳ, ಪ್ರೀತಿ-ಪ್ರೇಮಕ್ಕಿಂತ ಬೇರೆ ಏನೂ ದೊಡ್ಡದಲ್ಲ ಎಂದು ಭಾವಿಸುವ ನಾಯಕನ ತಂದೆ, ತಂದೆಯಲ್ಲದ ವ್ಯಕ್ತಿಯನ್ನು ತಂದೆಯಾಗಿ ನೋಡುವ ನಾಯಕನ ಒದ್ದಾಟಗಳು, ಸ್ನೇಹದ ಹೆಸರಿನಲ್ಲಿ ನಡೆಸುವ ಮೋಸ, ಕೊನೆಗೆ ಯಾವುದು ತಪ್ಪು, ಯಾವುದು ಸರಿ ಎಂದು ಯೋಚಿಸುವ ಹೊತ್ತಿಗೆ, ಕೈಮ್ಯಾಕ್ಸ್ನ ತಿರುವು ಅಚ್ಚರಿ ಮೂಡಿಸಿ, ಕಾಡುವಂತೆ ಮಾಡುತ್ತದೆ.
ವಿಷ್ಣು ಪ್ರಿಯ
ತಾರಾಗಣ: ಶ್ರೇಯಸ್, ಪ್ರಿಯಾ ವಾರಿಯರ್, ಅಚ್ಯುತ್ ಕುಮಾರ್, ಅಶ್ವಿನಿ, ನಿಹಾಲ್ ರಾಜ್
ನಿರ್ದೇಶನ: ವಿ.ಕೆ. ಪ್ರಕಾಶ್
ಕಾಡುವ ಚಿತ್ರಗಳ ಕತೆ ಏನು ಅಂತ ಕೇಳುವುದಕ್ಕಿಂತ ನೋಡುವುದು ಉತ್ತಮ. ಶ್ರೇಯಸ್ ಅಭಿನಯ, ಡ್ಯಾನ್ಸ್, ಫೈಟ್, ಡೈಲಾಗ್ನಲ್ಲಿ ಮಾತ್ರವಲ್ಲ ಎಮೋಷನ್ ದೃಶ್ಯಗಳಲ್ಲೂ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದ್ದಾರೆ. ಒಂದು ಚಿತ್ರಕ್ಕೆ ತಾಂತ್ರಿಕವಾಗಿ ಬೇಕಿರುವ ಅಂಶಗಳನ್ನು ಅಚ್ಚುಕಟ್ಟಾಗಿ ಜೋಡಿಸಿರುವುದರಿಂದ ಈ ವಿಷ್ಣು ಪ್ರೇಕ್ಷಕರಿಗೂ ಪ್ರಿಯವಾಗುತ್ತಾನೆ. ಹಸಿರು, ಮಳೆ, ಪ್ರೀತಿ, ಇಂಪಾದ ಸಂಗೀತ, ಕೇಳುವಂತಹ ಹಾಡುಗಳು... ಒಂದು ಚಿತ್ರ ನೋಡಲು ಇನ್ನೇನು ಬೇಕು?